ಒಂದು ಹಂತದಲ್ಲಿ ಬಾಲಿವುಡ್ಡಿನ ಸೂಪರ್ ಸ್ಟಾರ್ ಆಗಿ ಮೆರೆದಿದ್ದವರು ಆಮೀರ್ ಖಾನ್. ಅದೆಂಥಾದ್ದೇ ಪಾತ್ರವಾದರೂ ಅದಕ್ಕೊಗ್ಗಿಕೊಂಡು ನಟಿಸುವ ಛಾತಿ ಹೊಂದಿರೋ ಆಮಿರ್ ಅಪ್ರತಿಮ ನಟ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ಅವರು ಇದುವರೆಗೂ ನಿರ್ವಹಿಸಿರುವ ಪಾತ್ರಗಳೇ ಆಮೀರ್ ನಟನೆಯ ಛಾತಿಗೆ ಸಾಕ್ಷಿಯೆಂಬಂತಿವೆ. ಅದೆಂಥಾ ಮೇರು ನಟನೇ ಆದರೂ ಒಂದು ಹಂತದಲ್ಲಿ ಸೋಲಿನ ಭಯ ಆವರಿಸಿಕೊಳ್ಳುತ್ತೆ. ಕೆಲ ಮಂದಿ ಮತ್ತೆ ಮತ್ತೆ ಪ್ರಯತ್ನಿಸುತ್ತಾರೆ. ತಲೆಮಾರುಗಳಾಚೆಗೆ ಹೊಸಾ ಅಲೆಯೆದ್ದಾಗ, ದಡ ಸೇರಲಾಗದ ವಾತಾವರಣ ಕಂಡರೆ ಘನತೆಯಿಂದ ನಿರ್ಗಮಿಸುವವರೂ ಇದ್ದಾರೆ. ಸದ್ಯಕ್ಕೆ ಆಮೀರ್ ಖಾನ್ ಕೂಡಾ ಅಂಥಾದ್ದೊಂದು ನಿರ್ಧಾರ ಮಾಡಿದಂತಿದೆ.
ಸದ್ಯಕ್ಕೆ ಆಮೀರ್ ಖಾನ್ ಮಹಾಭಾರತ ಎಂಬ ಬಿಗ್ ಬಜೆಟ್ ಚಿತ್ರದ ಭಾಗವಾಗಿದ್ದಾರೆ. ಅದಕ್ಕೂ ಮುನ್ನ ಅವರ ಗಮನವೀಗ ಸಿತಾರೆ ಜಮೀನ್ ಪರ್ ಚಿತ್ರದತ್ತ ಕೇಂದ್ರೀಕರಿಸಿಕೊಂಡಿದೆ. ತಾರೇ ಜಮೀನ್ ಪರ್ ದಶಕದ ಹಿಂದೆ ತೆರೆಗಂಡು ಸೂಪರ್ ಹಿಟ್ ಆಗಿದ್ದ ಸಿನಿಮಾ. ಒಂದು ಸುದೀರ್ಘ ಗ್ಯಾಪಿನ ನಂತರದಲ್ಲಿ ಆಮೀರ್ ಖಾನ್ ಬಲು ಆಸ್ಥೆಯಿಂದ ಅದರ ಸೀಕ್ವೆಲ್ ಅನ್ನು ಸಿದ್ಧಪಡಿಸಿದ್ದಾರೆ. ಯಾವುದೇ ಸಿನಿಮಾ ಒಪ್ಪಿಕೊಂಡರೂ ಅದನ್ನೇ ಬದುಕಾಗಿಸಿಕೊಳ್ಳುವ ಆಮೀರ್ ಮಿಸ್ಟರ್ ಪರ್ಫೆಕ್ಟ್ ಎಂದೇ ಹೆಸರಾಗಿರುವವರು. ಈ ಚಿತ್ರ ಇದೇ ತಿಂಗಳ ಇಪ್ಪತ್ತರಂದು ಬಿಡುಗಡೆಗೊಳ್ಳಲಿದೆ. ಅದಾದ ನಂತರ ಆಮೀರ್ ಖಾನ್ ಮಹಾಭಾರತದತ್ತ ಹೊರಳಿಕೊಳ್ಳಲಿದ್ದಾರೆ.
ಸದ್ಯದ ಮಟ್ಟಿಗೆ ಮಹಾಭಾರತದ ಮಟ್ಟಿಗೆ ಭಾರೀ ನಿರೀಕ್ಷೆಗಳಿದ್ದಾವೆ. ಆದರೆ, ಸದರಿ ಸಿನಿಮಾದ ಭೂಮಿಕೆಯಲ್ಲಿ ಆಮೀರ್ ಖಾನ್ ತನ್ನ ಅಭಿಮಾನಿಗಳೆಲ್ಲ ಶಾಕ್ ಆಗುವಂಥಾ ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಸಿತಾರೆ ಜಮೀನ್ ಪರ್ ಚಿತ್ರದ ನಂತರ ಮಹಾಭಾರತದಲ್ಲಿ ಬ್ಯುಸಿಯಾಗೋದಾಗಿ ಹೇಳಿಕೊಂಡಿರುವ ಆಮೀರ್, ಅದರ ನಂತರ ನನ್ನ ಕೈಲಿ ಏನೂ ಮಾಡಲು ಸಾಧ್ಯವಿಲ್ಲ ಎಂಬರ್ಥದಲ್ಲಿ ಮಾತಾಡಿದ್ದಾರೆ. ಅವರ ಈ ಮಾತುಗಳನ್ನೀಗ ನಾನಾ ಥರದಲ್ಲಿ ವಿಶ್ಲೇಷಣೆಗೊಳಪಡಿಸುವ ಸರ್ಕಸ್ಸುಗಳು ನಡೆಯುತ್ತಿವೆ. ಆಮೀರ್ ಮಹಾಭಾರತದ ನಂತರ ನಟನಾಗಿ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಾರೆಂಬ ಮಾತೇ ಬಲವಾಗಿ ಕೇಳಿ ಬರುತ್ತಿದೆ. ಆ ನಂತರದಲ್ಲವರು ನಿರ್ಮಾಪಕರಾಗಿ ಸದಭಿರುಚಿಯ ಚಿತ್ರಗಳಿಗೆ ಸಾಥ್ ಕೊಡುವ ಸಾಧ್ಯತೆಗಳಿದ್ದಾವೆ.