ಬಾಹುಬಲಿ ಪ್ರಭಾಸ್ ವೃತ್ತಿ ಬದುಕಿಗೆ ಕವಿದಿದ್ದ ಸೋಲಿನ ಕಾವಳವೀಗ ಕರಗಿದಂತಿದೆ. ಇನ್ನೇನು ಪ್ರಭಾಸ್ ವೃತ್ತಿ ಬದುಕಿನ ಕಥೆ ಮುಗೀತು ಎಂಬಂಥಾ ವಾತಾವರಣವಿರುವಾಗಲೇ, ಕಲ್ಕಿ ಮೂಲಕ ಗೆಲುವಿನ ಕಿಡಿ ಮೂಡಿಕೊಂಡಿತ್ತು. ಬಾಹುಬಲಿಯಂಥಾ ಸರಣಿ ಗೆಲುವಿನ ನಂತರ ಯಾವ ನಟನಾದರೂ ಈ ಪರಿಯ ಸೋಲು ಕಾಣುವ ಸ್ಥಿತಿ ಬರುತ್ತಿರಲಿಲ್ಲ. ಆದರೆ, ಪ್ರಭಾಸ್ ಪಾಲಿಗೆ ಮಾತ್ರ ಖುದ್ದು ಅಭಿಮಾನಿಗಳೇ ಕಂಗಾಲಾಗುವಂಥಾ ಸರಣಿ ಸೋಲುಗಳು ಎದುರಾಗಿದ್ದವು. ಹೀಗೆ ಡಾರ್ಲಿಂಗ್ ಪ್ರಭಾಸ್‌ಗೆ ಸುತ್ತಿಕೊಂಡಿದ್ದ ಸಾಲು ಸಾಲು ಸೋಲುಗಳನ್ನು ಹಲವರು ನಾನಾ ದಿಕ್ಕುಗಳಲ್ಲಿ ಪರಾಮರ್ಶೆಗೀಡು ಮಾಡಿದ್ದರು. ಆದರೆ, ಪ್ರಧಾನ ಕಾರಣವಾಗಿ ಕಂಡದ್ದು ಪ್ರಭಾಸನ ಸ್ನೇಹಶೀಲತೆ ಮತ್ತು ಸ್ನೇಹಕ್ಕಾಗಿ ಏನನ್ನಾದರೂ ಸಿದ್ಧವಿರುವ ಮನಃಸ್ಥಿತಿಯಷ್ಟೇ!

ಮೇಲ್ಕಂಡ ವಿಶ್ಲೇಷಣೆಯನ್ನು ಪ್ರಭಾಸ್‌ರನ್ನು ದೂರದಿಂದ ಕಂಡ ಮಂದಿ ಒಪ್ಪಿಕೊಳ್ಳೋದಕ್ಕೆ ತುಸು ಕಷ್ಟವಾದೀತೆನೋ. ಆದರೀಗ ಪ್ರಭಾಸ್ ಮೇಲ್ಕಂಡ ವಿಚಾರವನ್ನು ಅನುಮೋದಿಸುವಂತೆ ನಡೆದುಕೊಂಡಿದ್ದಾರೆ. ಬಹುನಿರೀಕ್ಷಿತ ಚಿತ್ರವಾದ ರಾಜಾ ಸಾಬ್ ಚಿತ್ರದ ಸಂಭಾವನೆಯ ವಿಚಾರದಲ್ಲಿ ಪ್ರಭಾಸ್ ಎಲ್ಲರೂ ಮೆಚ್ಚುವಂತೆ ನಡೆದುಕೊಂಡಿದ್ದಾರೆ. ಸಾಮಾನ್ಯವಾಗಿ, ಸ್ಟಾರ್ ನಟರು ಸಿನಿಮಾದಿಂದ ಸಿನಿಮಾಕ್ಕೆ ಸಂಭಾವನೆ ಹೆಚ್ಚು ಮಾಡಿಕೊಳ್ಳುತ್ತಾರೆ. ಆದರೆ ಪ್ರಭಾಸ್ ರಾಜಾಸಾಬ್ ಚಿತ್ರಕ್ಕಾಗಿ ಭರ್ತಿ ಐವತ್ತು ಕೋಟಿ ಸಂಭಾವನೆ ಇಳಿಸಿಕೊಂಡಿದ್ದಾರೆ. ಅದರ ಹಿಂದಿರುವ ಕಾರಣವಂತೂ ನಿಜಕ್ಕೂ ವಿಶೇಷವಾಗಿದೆ!

ರಾಜಾ ಸಾಬ್ ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣ ಮಾಡುತ್ತಿದೆ. ಈ ಹಿಂದೆ ಪ್ರಭಾಸ್ ಆದಿಪುರುಷ್ ಎಂಬ ಸಿನಿಮಾದಲ್ಲಿ ನಟಿಸಿದ್ದರಲ್ಲಾ? ಅದು ಅತ್ಯಂತ ಹೀನಾಯವಾಗಿ ಸೋಲು ಕಂಡಿತ್ತು. ಆ ಚಿತ್ರವನ್ನು ತೆಲುಗಿನಲ್ಲಿ ವಿತರಣೆ ಮಾಡಿದ್ದದ್ದು ಇದೇ ಸಂಸ್ಥೆ. ಆದಿ ಪುರುಷ್ ಅದ್ಯಾವ ಪರಿಯಾಗಿ ಕವುಚಿಕೊಂಡಿತ್ತೆಂದರೆ, ಪೀಪಲ್ ಮೀಡಿಯಾ ಫ್ಯಾಕ್ಟರಿಗೆ ಭಯಾನಕವಾಗಿಯೇ ಲುಕ್ಸಾನು ಮಾಡಿಕೊಂಡಿತ್ತು. ಹಾಗೆ ಆದ ನಷ್ಟ ಭರಿಸಿ ಕೊಡುವ ಉದ್ದೇಶದಿಂದಲೇ ಪ್ರಭಾಸ್ ರಾಜಾ ಸಾಬ್ ಚಿತ್ರದಲ್ಲಿ ಐವತ್ತು ಕೋಟಿ ಕಡಿಮೆ ಸಂಭಾವನೆ ತೆಗೆದುಕೊಂಡಿದ್ದಾರಂತೆ. ಪ್ರಭಾಸ್ ಈಗ ಪ್ರತೀ ಸಿನಿಮಾಗೆ ನೂರೈವತ್ತು ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ, ರಾಜಾ ಸಾಬ್ ಗಾಗಿ ಆತ ತೆಗೆದುಕೊಂಡಿದ್ದು ನೂರು ಕೋಟಿ ಮಾತ್ರ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!