ಪವನ್ ಕಲ್ಯಾಣ್ ಇದೀಗ ಪೂರ್ಣ ಪ್ರಮಾಣದ ರಾಜಕಾರಣಿಯಾಗಿದ್ದಾರೆ. ಈ ವಲಯದಲ್ಲಿ ಹೇಗೆಲ್ಲ ಸಾಧ್ಯವೋ ಹಾಗೆಲ್ಲ ಚಾಲ್ತಿಯಲ್ಲಿರುವ ಆತ ನಾಯಕ ನಟನಾಗಿಯೂ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದ್ದಾರೆ. ಆರಂಭದಿಂದಲೂ ಸಾಕಷ್ಟು ಕ್ರೇಜ್ ಮೂಡಿಸಿದ್ದ ಹರಹರ ವೀರಮಲ್ಲು ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿರುವಾಗಲೇ ಒಳಗಿಂದೊಳಗೆ ನಾನಾ ಸವಾಲುಗಳಿಗೆ ಎದೆಯೊಡ್ಡುವ ಸ್ಥಿತಿ ಬಂದೊದಗಿದೆ. ಈ ಬಗ್ಗೆ ನಾನಾ ರೂಮರುಗಳು ತೆಲುಗು ಚಿತ್ರರಂಗದಲ್ಲಿ ಹರಿದಾಡಲಾರಂಭಿಸಿವೆ. ಆರಂಭಿಕ ವ್ಯವಹಾರ ಮತ್ತು ವಹಿವಾಟುಗಳಲ್ಲಿಯೇ ಹರಿಹರ ವೀರಮಲ್ಲು ಮುಗ್ಗರಿಸಿದ್ದಾನೆಂಬುದು ಅಂಥಾ ರೂಮರುಗಳ ಸಾರಾಂಶ. ಇದಕ್ಕೆ ಸರಿಯಾಗಿ ಇದೀಗ ಈ ಸಿನಿಮಾ ಬಿಡುಗಡೆ ದಿನಾಂಕವೂ ಮುಂದೂಡಲ್ಪಟ್ಟಿದೆ!
ರಾಜಕೀಯಕ್ಕೆ ಎಂಟ್ರಿ ಕೊಡುವ ಹೊಸ್ತಿಲಿನಲ್ಲಿಯೇ ಪವನ್ ಕಲ್ಯಾಣ್ ಶುರುವಿಟ್ಟುಕೊಂಡಿದ್ದ ಸಿನಿಮಾ ಹರಿಹರ ವೀರಮಲ್ಲು. ಶುರುವಾದಲ್ಲಿಂದಲೂ ಕೂಡಾ ಸದರಿ ಸಿನಿಮಾ ಬಗ್ಗೆ ಒಂದಷ್ಟು ನಿರೀಕ್ಷೆಗಳಿದ್ದದ್ದು ನಿಜ. ಆ ಬಳಿಕ ಹಂತ ಹಂತವಾಗಿ ಹರಿಕಹರವೀರಮಲ್ಲು ಜನರ ಗಮನವನ್ನ ತನ್ನೆಡೆಗೆ ಸೆಳೆದುಕೊಳ್ಳುವಲ್ಲಿ ಯಶ ಕಂಡಿತ್ತು. ಆದರೆ, ಇನ್ನೇನು ಬಿಡುಗಡೆ ದಿನಾಂಕ ಹತ್ತಿರದಲ್ಲಿರುವಾಗಲೇ ಎಲ್ಲವೂ ಅದಲು ಬದಲಾಗಿ ಬಿಟ್ಟಿದೆ. ಇದೇ ಜೂನ್ ೧೨ರಂದು ಬಿಡುಗಡೆ ದಿನಾಂಕ ನಿಗಧಿಯಾಗಿತ್ತು. ಆದರೆ, ವಾರವ ಮಾತ್ರ ಬಾಕಿ ಇರುವಾಗ ಏಕಾಏಕಿ ಬಿಡುಗಡೆ ದಿನಾಂಕ ಮುಂದೂಡಲಾಗಿದೆ. ಜುಲೈ ತಿಂಗಳಲ್ಲಿ ತೆರೆಗಾಣಬಹುದೆಂಬ ಊಹಾಪೋಹಗಳು ಹಬ್ಬಿಕೊಂಡಿವೆ.
ಹಾಗಾದರೆ, ಈ ಬಿಗ್ ಬಜೆಟ್ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ ಯಾಕಿಂಥಾ ಹಿನ್ನಡೆ ಅನುಭವಿಸಿದೆ? ನಿರ್ಮಾಪಕರಿಗೆ ಸೋಲಿನ ಭಯ ಕಾಡುತ್ತಿದೆಯಾ? ಇಂಥಾ ನಾನಾ ಪ್ರಶ್ನೆಗಳು ಸಹಜವಾಗಿಯೇ ಮೂಡಿಕೊಂಡಿವೆ. ಇದಕ್ಕೆ ನಿರ್ಮಾಪಕ ಎ.ಎಂ ರತ್ನಮ್ ಪ್ರತಿಕ್ರಿಯಿಸಿ, ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಗಳಲು ಪ್ರಯತ್ನಿಸಿದ್ದಾರೆ. ಆದರೆ, ಇದೆಲ್ಲದರ ನಡುವೆಯೂ ಹರಿಹರ ವೀರಮಲ್ಲು ಚಿತ್ರದ ಬಗ್ಗೆ ತೀವ್ರವಾಗಿ ನಕಾರಾತ್ಮಕ ವಿಚಾರಗಳು ಹಬ್ಬಿಕೊಳ್ಳುತ್ತಿದ್ದಾವೆ. ನಿರೀಕ್ಷೆಯ ಮಟ್ಟಕ್ಕೆ ಇದರ ದೃಶ್ಯಗಳು ಮೂಡಿ ಬಂದಿಲ್ಲ. ಈ ಕಾರಣದಿಂದಲೇ ವ್ಯವಹಾರದಲ್ಲಿಯೂ ಹಿನ್ನಡೆ ಎದುರಾಗುತ್ತಿದೆ ಎಂಬಂಥಾ ಮಾತುಗಳೂ ಹರಿದಾಡುತ್ತಿವೆ. ಇಂಥಾ ವಾತಾವರಣ ನೋಡಿದರೆ, ಮುಂದಿನ ದಿನಗಳಲ್ಲಿ ಪವನ್ಗಾರು ಪಾಲಿಗೆ ರಾಜಕಾರಣವೊಂದೇ ಗತಿ ಎಂಬಂಥಾ ಸ್ಥಿತಿ ಎದುರಾದರೂ ಅಚ್ಚರಿ ಪಡುವಂತಿಲ್ಲ!