ಈ ಹಿಂದಿನ ದಿನಮಾನಗಳಿಗೆ ಹೋಲಿಸಿದರೆ ರಂಗಭೂಮಿಯ ಪ್ರಭೆ, ಅದರೆಡೆಗಿನ ಜನಸಾಮಾನ್ಯರ ಆಸಕ್ತಿ ಕೊಂಚ ಕಡಿಮೆಯಾಗುತ್ತಿದೆ ಎಂಬಂಥಾ ಕೊರಗು ರಂಗಾಸಕ್ತರಿಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗುತ್ತಿರೋಮ ಹೊಸಾ ತಲೆಮಾರನ್ನು ರಂಗಭೂಮಿಯತ್ತ ಆಕರ್ಷಿಸುವ ಬಗೆಗೂ ಚರ್ಚೆಗಳು ನಡೆಯುತ್ತಿವೆ. ಇಂಥಾ ಹೊತ್ತಿನಲ್ಲಿಯೇ ಕಲಾದ್ಯುತಿ ಪ್ರೊಡಕ್ಷನ್ಸ್ ತಂಡ ಸದ್ದಿಲ್ಲದೆ ಹೊಸತಲೆಮಾರನ್ನು ರಂಗದತ್ತ ಸೆಳೆಯುವ ಕ್ರಿಯಾಶೀಲ ಹಾದಿಯಲ್ಲಿ ಗಮನಾರ್ಹವಾದ ಹೆಜ್ಜೆಗಳನ್ನಿಡುತ್ತಿದೆ. ಅದರ ಪ್ರಥಮ ಹೆಜ್ಜೆಯೆಂಬಂತೆ ಈ ಹಿಂದೆ ಉಂಡಾಡಿಗುಂಡ ಎಂಬ ನಾಟಕವೊಂದು ಯಶಸ್ವೀ ಪ್ರದರ್ಶನ ಕಂಡಿತ್ತು. ಎರಡನೇ ಹೆಜ್ಜೆಯಾಗಿ `ಮಳೆ ನಿಲ್ಲುವವರೆಗೆ’ ಎಂಬ ನಾಟಕ ದೇ ಸೆಪ್ಟೆಂಬರ್ ೧೭ನೇ ತಾರೀಕಿನಂದು ಸಂಜೆ ೭.೩೦ಕ್ಕೆ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಪ್ರದರ್ಶನಗೊಳ್ಳಲು ತಯಾರಾಗಿದೆ. ಈ ಮೂಲಕ ರಂಗಭೂಮಿಯಲ್ಲೊಂದು ಸಂಚಲನ ಶುರುವಾಗುವ ಘಳಿಗೆಯೂ ಸನ್ನಿಹಿತವಾಗುತ್ತಿದೆ.

ಕೆಎಎಸ್ ಕ್ಲಾಸ್೧ ಅಧಿಕಾರಿಯಾಗಿ, ನಟ, ಲೇಖಕರಾಗಿ ಕರ್ನಾಟಕದ ತುಂಬೆಲ್ಲ ಮನೆ ಮಾತಾಗಿದ್ದ ಎಲ್.ಎಸ್ ಸುಧೀಂದ್ರ ದಶಕಗಳಷ್ಟು ಹಿಂದೆಯೇ ಜರ್ಮನ್ ಕಥೆಯೊಂದನ್ನು ಆಧರಿಸಿ `ಮಳೆ ನಿಲ್ಲುವವರೆಗೆ’ ಎಂಬ ನಾಟಕವೊಂದನ್ನು ರಚಿಸಿದ್ದರು. ಅದೇ ನಾಟಕವನ್ನು ಹೊಸತನದೊಂದಿಗೆ ಶರತ್ ಪರ್ವತವಾಣಿ ನಿರ್ದೇಶನ ಮಾಡಿದ್ದಾರೆ. ಈ ಮೂಲಕ ರಾಜೇಶ್ ನಟರಂಗ ವಿಶೇಷವಾದ ಪಾತ್ರವೊಂದರ ಮೂಲಕ ಎರಡು ದಶಕಗಳ ನಂತರ ರಂಗಭೂಮಿಗೆ ಮರಳುತ್ತಿದ್ದಾರೆ. ರಂಗಭೂಮಿಯಿಂದಲೇ ನಟನಾಗಿ ಹೊರಹೊಮ್ಮಿದ್ದ ರಾಜೇಶ್ ನಟರಂಗ ಸಿನಿಮಾ, ಕಿರುತೆರೆ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದುಕೊಂಡಿದ್ದವರು. ಅವನ್ನು ಮೆಚ್ಚಿಕೊಂಡಿರುವ ಅಭಿಮಾನಿಗಳಿಗೀಗ ರಂಗದ ಮೂಲಕ ನೇರವಾಗಿ, ವಿಶಿಷ್ಟ ಪಾತ್ರದಲ್ಲಿ ಕಣ್ತುಂಬಿಕೊಳ್ಳುವ ಸದವಕಾಶ ಕೂಡಿಬಂದಿದೆ.
ಶರತ್ ಪರ್ವತವಾಣಿ ಯುವ ಸಮೂಹವನ್ನು ಸೆಳೆದುಕೊಳ್ಳುವ ಪ್ರಯೋಗಾತ್ಮಕ ಗುಣಗಳೊಂದಿಗೆ ಈ ನಾಟಕವನ್ನು ನಿರ್ದೇಶನ ಮಾಡಿದ್ದಾರೆ. ರೋಚಕವಾದ ಥ್ರಿಲ್ಲರ್ ಛಾಯೆಗಳೊಂದಿಗೆ, ಬೇರೆಯದ್ದೇ ತೆರನಾದ ಅನುಭೂತಿಯೊಂದನ್ನು ನೋಡುಗರನ್ನು ಆವರಿಸಿಕೊಳ್ಳುವಂತೆ ಈ ನಾಟಕವನ್ನು ರೂಪಿಸಲಾಗಿದೆ. ಓರ್ವ ನಿವೃತ್ತ ನ್ಯಾಯಾಧೀಶ, ಸೇಲ್ಸ್ಮನ್ ಸೇರಿದಂತೆ ಒಂದಷ್ಟು ಬಗೆಯ ಪಾತ್ರಗಳ ಸುತ್ತ ತೆರೆದುಕೊಳ್ಳುವ ಈ ನಾಟಕ ಬೆರಗಿನೊಂದಿಗೆ ನೋಡಿಸಿಕೊಳ್ಳಲಿದೆ ಎಂಬ ನಂಬಿಕೆ ತಂಡಕ್ಕಿದೆ. ಇತ್ತೀಚಿನ ದಿನಗಳಲ್ಲಿ ಓದು, ನಾಟಕಗಳತ್ತ ಮೆಲ್ಲಗೆ ತೆರೆದುಕೊಳ್ಳುತ್ತಿರುವ ಯುವ ಸಮುದಾಯ ಸದರಿ ನಾಟಕವನ್ನು ನೋಡಿ ಸಂಭ್ರಮಿಸುವಂತಾದರೆ, ಕಲಾದ್ಯುತಿ ಪ್ರೊಡಕ್ಷನ್ಸ್ ತಂಡದ ಆಶಯ, ಪರಿಶ್ರಮ ಸಾರ್ಥಕಗೊಂಡಂತಾಗುತ್ತದೆ.
ಈ ನಾಟಕವನ್ನು ರಚಿಸಿರುವ ಎಲ್.ಎಸ್ ಸುಧೀಂದ್ರ ಕ್ಲಾಸ್೧ ಕೆಎಎಸ್ ಅಧಿಕಾರಿಯಾಗಿದ್ದವರು. ಸರ್ಕಾರಿ ಅಧಿಕಾರಿಯಾಗಿದ್ದರೂ ಅತೀವ ಕಲಾಪ್ರೇಮ ಹೊಂದಿದ್ದ ಸುಧೀಂದ್ರ ಅವರು ರಂಗಭೂಮಿಗೆ ಅನುಕೂಲವಾಗುವಂಥಾ ಅನೇಕ ಕೆಲಸ ಕಾರ್ಯಗಳನ್ನು ಸೇವಾವಧಿಯಲ್ಲಿ ಮಾಡಿದ್ದರು. ಸ್ವತಃ ನಟ, ಲೇಖಕರಾಗಿ, ಅಜ್ಞಾತರಾಗಿದ್ದ ಅವರನ್ನು ಕಲಾದ್ಯುತಿ ತಂಡ ರಿಚರ್ಡ್ ಲೂಯಿಸ್ ಅವರ ಸಹಕಾರದಿಂದ ಸಂಪರ್ಕಿಸಿದೆ. ಬಹಳಷ್ಟು ಪ್ರಯತ್ನ ನಡೆಸಿ ಈ ನಾಟಕದ ಪ್ರತಿಯನ್ನು ಕಲೆ ಹಾಕಿ ಅದಕ್ಕೆ ನವ ಸ್ಪರ್ಶ ನೀಡಿ ಪ್ರೇಕ್ಷಕರ ಮುಂದೆ ತರುತ್ತಿದೆ. ಜಾಹೀರಾತು ನಿರ್ಮಾಣ ಲೋಕದಲ್ಲಿ ದೊಡ್ಡ ಹೆಸರು ಮಾಡಿರುವ ಪ್ರದೀಪ್ ಬೆಳವಾಡಿ ಅವರು ಈ ನಾಟಕದ ಸೆಟ್ ರೂಪಿಸಲಿದ್ದಾರೆ. ಒಟ್ಟಾರೆಯಾಗಿ ಮಳೆ ನಿಲ್ಲುವವರೆಗೂ ನಾಟಕದ ಮೂಲಕ ರಂಗಭೂಮಿಯಲ್ಲಿ ನವ ಸಂಚನವೊಂದು ಮೂಡಿಕೊಳ್ಳುವ ಘಳಿಗೆ ಸಮೀಪಿಸುತ್ತಿದೆ.
keywords: kaladyuthi productions, rajesh nataranga, male nilluvavarege

