ಸಿನಿಮಾ ಎಂಬ ಮಾಯಕದ ಜಗತ್ತಿನಲ್ಲಿ ಸೋಲು ಗೆಲುವುಗಳ ಅಳತೆಗೋಲು ಕೆಲವೊಮ್ಮೆ ಅಂದಾಜಿಗೆ ನಿಲುಕುವುದಿಲ್ಲ. ನಟ, ನಟಿಯರಾಗಿ ನೆಲೆ ಕಂಡುಕೊಳ್ಳುವ ಎಲ್ಲ ಅರ್ಹತೆ, ಪ್ರತಿಭೆ (talent) ಇದ್ದವರನ್ನೂ ಗೆಲುವೆಂಬುದು ಹೀನಾಯವಾಗಿ ಸತಾಯಿಸಿ ಬಿಡುತ್ತದೆ. ಇಂಥಾ ದುರಂತ ನಾಯಕರ ಪಟ್ಟಿಯೊಂದಿದೆ. ಆ ಸಾಲಿನಲ್ಲಿ ದುರಂತವೆಂಬಂತೆ (vijay raghavendra) ವಿಜಯ್ ರಾಘವೇಂದ್ರ ಕೂಡಾ ಸೇರಿಕೊಳ್ಳುತ್ತಾರೆ. ದೊಡ್ಮನೆ ಕುಟುಂಬದ ಕುಡಿ ಎಂಬುದರಾಚೆಗೆ ರಾಘು ತನ್ನ ನಟನಾ ಪ್ರತಿಭೆಯಿಂದಲೇ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದರು. ಆದರೆ, ಅದೇಕೋ ಮುಖ್ಯನಾಯಕರ ಸಾಲಿನಲ್ಲಿ ಭದ್ರವಾಗಿ ನೆಲೆ ಕಂಡುಕೊಳ್ಳಲು ಸಾಧ್ಯವಾಗಲೇ ಇಲ್ಲ. ಆದರೆ, ಇದೆಲ್ಲದರಾಚೆಗೂ ರಾಘುವಿನ (vijay raghavendra) ಪ್ರಯತ್ನ ಚಾಲ್ತಿಯಲ್ಲಿದೆ. ಅದರ ಭಾಗವಾಗಿಯೇ ಇದೀಗ `ಓ ಮನಸೇ’ (o manase)  ಎಂಬ ಸಿನಿಮಾ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ!

ಹಾಗೆ ನೋಡಿದರೆ, ವಿಜಯ್ ರಾಘವೇಂದ್ರ (vijay raghavendra) ಸೋಲು ಗೆಲುವಿನಚೆಗೆ ಪ್ರಯತ್ನವನ್ನು ಸದಾ ಚಾಲ್ತಿಯಲ್ಲಿಟ್ಟಿದ್ದಾರೆ. ಸಿನಿಮಾ ಸೋತರೂ ನಟನೆಯೆಂಬುದು ಪ್ರೇಕ್ಷಕರ ಮನಸಲ್ಲುಳಿಯುವಂಥಾ ಎಚ್ಚರವೊಂದನ್ನು ಸದಾ ಕಾಪಿಟ್ಟಕೊಂಡು ಬಂದಿದ್ದಾರೆ. ಅದರ ಫಲವಾಗಿಯೇ ಅವರು ನಟಿಸಿದ ಸಿನಿಮಾಗಳು ನಿರೀಕ್ಷಿತ ಗೆಲುವು ಕಾಣದಿದ್ದರೂ, ರಾಘುವಿನ ನಟನೆಗೆ ಮಾತ್ರ ಫುಲ್ ಮಾಕ್ರ್ಸ್ ಸಿಗುತ್ತಲೇ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಭಿನ್ನ ಕಥೆ, ಪ್ರಯೋಗಾತ್ಮಕ ಪಾತ್ರಗಳಿಗೂ ಒಡ್ಡಿಕೊಂಡಿರುವ ರಾಘು ಒಂದಷ್ಟು ಚಾಲ್ತಿಯಲ್ಲಿದ್ದಾರೆ. ಅತ್ತ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗುತ್ತೇ, ಇತ್ತ ಓ ಮನಸೇ ಚಿತ್ರವನ್ನವರು ಬಹುತೇಕ ಮುಗಿಸಿಕೊಂಡಿದ್ದಾರೆ.

ಅವರೇ ಹೇಳಿಕೊಂಡಿರುವ ಮಾತುಗಳನ್ನು ಆಧರಿಸಿ ಹೇಳೋದಾದರೆ, ಈ ಸಿನಿಮಾದ ಕಥೆ ಕೊಂಚ ವಿಶೇಷವಾಗಿದೆ. ತ್ರಿಕೋನ ಪ್ರೇಮ ಕಥೆಯನ್ನೊಳಗೊಂಡಿದ್ದರೂ ಶಿಕ್ಷಣ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಸಾಮಾಜಿಕ ಕಾಳಜಿಯೂ ಈ ಕಥೆಯಲ್ಲಿ ಅಡಕವಾಗಿದೆಯಂತೆ. ತನ್ನ ಪಾತ್ರದ ಬಗ್ಗೆಯೂ ರಾಘವೇಂದ್ರ ಒಳಗೊಂದು ಖುಷಿ ಇದ್ದಂತಿದೆ. ಅಂದಹಾಗೆ, ಈ ಚಿತ್ರವನ್ನು ಉಮೇಶ್ ಗೌಡ ನಿರ್ದೇಶನ ಮಾಡಿದ್ದಾರೆ. ನಾಲ್ವರು ಗೆಣೆಕಾರರು ಸೇರಿಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಾವ ಗೌಜು ಗದ್ದಲವೂ ಇಲ್ಲದೇ, ಸುಸೂತ್ರವಾಗಿ ಚಿತ್ರೀಕರಣ ಮುಗಿಸಿಕೊಂಡಿರುವ ಖುಷಿ ಚಿತ್ರತಂಡದಲ್ಲಿದೆ.

ಮತ್ತೊಂದು ವಿಶೇಷವೆಂದರೆ, ಈ ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ಕೂಡಾ ನಾಯಕರಲ್ಲೊಬ್ಬರಾಗಿ ನಟಿಸಿದ್ದಾರೆ. ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ಕಲಾವಿದರಾದ ಕೀರ್ತಿರಾಜ್ ಪುತ್ರನಾದ ಧರ್ಮ ಕೂಡಾ ನತದೃಷ್ಟ ನಟ. ಯಾಕೆಂದರೆ, ಒಂದಷ್ಟು ಅವಕಾಶಗಳು ಸಿಕ್ಕರೂ ಕೂಡಾ ಅಂದುಕೊಂಡಂತೆ ಮಿಂಚಲು ಸಾಧ್ಯವಾಗಿಲ್ಲ. ಇದುವರೆಗೂ ಮಾಸ್ ಮೂಡಲ್ಲಿ ಹ್ಞೂಂಕರಿಸಿ ಮುಗ್ಗರಿಸಿರುವ ಧರ್ಮನ ಲಕ್ಕು ಈ ಸಿನಿಮಾ ಮೂಲಕವಾದರೂ ಕುದುರಬಹುದಾದ ಸಾಧ್ಯತೆಗಳಿದ್ದಾವೆ. ಇನ್ನುಳಿದಂತೆ ಬಹು ಕಾಲದಿಂದ ಚಿತ್ರರಂಗದಿಂದ ದೂರ ಉಳಿದಿದ್ದ ಸಂಚಿತಾ ಪಡುಕೋಣೆ ಈ ಚಿತ್ರದ ನಾಯಕಿ. ಹರೀಶ್ ರಾಯ್, ಶೋಭರಾಜ್, ಸಾಧ ಕೋಕಿಲಾ, ಕಿಲ್ಲರ್ ವೆಂಕಟೇಶ್, ರುಶಿಕ, ವಾಣಿಶ್ರೀ, ಜಯರಾಂ ಮುಂತಾದವರ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!