ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ರಾಜಕೀಯದತ್ತ ಹೊರಳಿಕೊಂಡಿದ್ದಾತ ದಳಪತಿ ವಿಜಯ್. ತಮಿಳುನಾಡಿನ ಮಟ್ಟಿಗೆ ಸಿನಿಮಾ ಮಂದಿ ರಾಜಕಾರಣಿಗಳಾಗೋದು ವಿಶೇಷವೇನಲ್ಲ. ಆದರೆ, ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಘಳಿಗೆಯಿಂದ ವಿಶೇಷ, ವಿಚಿತ್ರವೆನ್ನಿಸುವಂಥಾ ವಿದ್ಯಮಾನಗಳೇ ಸಾಲುಸಾಲಾಗಿ ಘಟಿಸಲಾರಂಭಿಸಿವೆ. ತನ್ನ ಶಕ್ತಿಪ್ರದರ್ಶನದ ಸಮಾವೇಶ ನಡೆಸಿದ್ದ ವಿಜಯ್ಗೆ ಕಾಲ್ತುಳಿತದಿಂದಾದ ಸಾವು ನೋವಿನ ಸೂತಕ ಸುತ್ತಿಕೊಂಡಿತ್ತು. ಇದರಿಂದೆದುರಾದ ಸವಾಲುಗಳಿಂದ ಸುಸ್ತಾಗಿದ್ದ ಧಳಪತಿಗೆ ಜನನಾಯಗನ್ ಚಿತ್ರದ ಬಿಡುಗಡೆಯೇ ಎಗರಿಕೊಂಡ ಆಘಾತ ಎದುರಾಗಿತ್ತು. ಇದೀಗ ಆತನ ಮುಂದಿರೋದು ಅಕ್ಷರಶಃ ಮರ್ಮಾಘಾತ. ಯಾಕೆಂದರೆ, ಈಗ ವಿಜಯ್ ವಿರುದ್ಧ ತಿರುಗಿ ಬಿದ್ದಿರೋದು ಇಪ್ಪತ್ತೇಳು ವರ್ಷಗಳ ಕಾಲ ಜೊತೆಯಾಗಿ ಬದುಕಿದ್ದ ಹೆಂಡತಿ!
ವಿಜಯ್ ಸಾಂಸಾರಿಕ ಜೀವನ ಅಸ್ತವ್ಯಸ್ಥಗೊಂಡು ಈಗೊಂದಷ್ಟು ವರ್ಷಗಳು ಕಳೆದಿದ್ದವು. ಆತ ಪ್ರಸಿದ್ಧ ನಟಿಯೋರ್ವಳ ಜೊತೆ ಅಫೇರು ಹೊಂದಿದ್ದಾನೆಂಬ ಸುದ್ದಿ ತಮಿಳುನಾಡಿನ ತುಂಬೆಲ್ಲ ಇಟ್ಟಾಡಿತ್ತು. ಇತ್ತೀಚೆಗಷ್ಟೇ ಬಿಜೆಪಿ ಮುಖಂಡನೋರ್ವ ನಟಿಯೋರ್ವಳ ಜೊತೆ ವಿಜಯ್ ಹೆಸರನ್ನು ತಳುಕು ಹಾಕಿ ಮಾತಾಡಿದ್ದ. ಇದರ ಬೆನ್ನಲ್ಲಿಯೇ ಆತನ ಪತ್ನಿ ಸಂಗೀತಾ ಸಿಡಿದೆದ್ದಿದ್ದಾರೆ. ವಿಜಯ್ನಿಂದ ವಿಚ್ಚೇಧನ ಪಡೆಯಲು ಮುಂದಾಗಿರೋ ಸಂಗೀತಾ, ತನ್ನ ಗಂಡನಿಗೆ ನಟಿಯೊಬ್ಬಳ ಜೊತೆ ಅಕ್ರಮ ಸಂಬಂಧ ಇದೆಯೆಂಬ ಬಾಂಬು ಸಿಡಿಸಿದ್ದಾರೆ. ಈ ಮೂಲಕ ವಿರೋಧಿ ಪಾಳೆಯ ಲಾಗಾಯ್ತಿನಿಂದಲೂ ಮಾಡಿಕೊಂಡು ಬರುತ್ತಿರುವ ಆಪಾದನೆ ನಿಜವಾದಂತೆ ಭಾಸವಾಗುತ್ತಿದೆ!
ಏಕಾಏಕಿ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಸಂಗೀತಾ ವಿಚ್ಚೇಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಗಮನೀಯ ಅಂಶವೆಂದರೆ, ವಿಜಯ್ ಸಾಂಸಾರಿಕ ಬದುಕು ಸರಿಯಾಗಿಲ್ಲ ಎಂಬ ಬಗ್ಗೆ ಸಾಕಷ್ಟು ಬಾರಿ ಚರ್ಚೆಯಾಗಿತ್ತು. ಆತ ನಟಿಯೋರ್ವಳ ಮನೆಯಲ್ಲಿಯೇ ಠಿಕಾಣಿ ಹೂಡಿದ್ದಾನೆಂಬ ವಿಚಾರವಂತೂ ಜಗಜ್ಜಾಹೀರಾಗಿತ್ತು. ವಯಸ್ಸು ನಲವತ್ತು ದಾಟಿದರೂ ಸಿಂಗಲ್ ಆಗುಳಿದಿರುವ, ಒಂದು ಹಂತದಲ್ಲಿ ನಶೆಯ ತೆಕ್ಕೆಗೆ ಬಿದ್ದಿದ್ದ ನಟಿಯೊಂದಿಗೆ ವಿಜಯ್ ಗುಟ್ಟಾಗಿ ಸಂಸಾರ ನಡೆಸುತ್ತಿದ್ದ. ಹಾಗಂತ ಬಲವಾಗಿಯೇ ರೂಮರುಗಳು ಹಬ್ಬಿಕೊಂಡಿದ್ದವು. ಆದರೆ, ಯಾವತ್ತೂ ಕೂಡಾ ಸಂಗೀತಾ ಈ ಬಗ್ಗೆ ಗುಟ್ಟು ಬಿಟ್ಟುಕೊಡದಂತೆ ಸಾಗಿ ಬಂದಿದ್ದರು. ಆದರೀಗ ವಿಜಯ್ನ ಬೇಲಿ ಹಾರೋ ಬುದ್ಧಿಯ ವಿರುದ್ಧ ರೊಚ್ಚಿಗೆದ್ದಿರೋ ಸಂಗೀತಾ ಆತನಿಂದ ಶಾಶ್ವತ ಮುಕ್ತಿಗಾಗಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ!
keywords: thalapathy vijay divorce case, sangitha, kollywood, jananayagan

