ಕೊರೋನಾ ನಂತರದಲ್ಲಿ ವರ್ಷಗಟ್ಟಲೆ ಕೋಮಾಕ್ಕೆ ಜಾರಿದ್ದ ಕನ್ನಡ ಚಿತ್ರರಂಗವೀಗ ಮೆಲ್ಲಗೆ ಚೇತರಿಸಿಕೊಳ್ಳುತ್ತಿದೆ. ಒಂದಷ್ಟು ಚೆಂದದ ಪ್ರಯತ್ನಗಳ ಮೂಲಕ ಮತ್ತೆ ಪ್ರೇಕ್ಷಕರನ್ನು ಸಿನಿಮಾ ಮಂದಿರಗಳತ್ತ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಓಟಿಟಿ ಮುಂತಾದವುಗಳು ಬೆರಳ ಮೊನೆಯಲ್ಲೇ ಇದ್ದರೂ ಕೂಡಾ, ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವ ಸಂಭ್ರಮದತ್ತ ಪ್ರೇಕ್ಷಕರು ಹೊರಳಿಕೊಳ್ಳುತ್ತಿದ್ದಾರೆ. ಇಂಥಾದ್ದೊಂದು ಸಕಾರಾತ್ಮಕ ಕಾಲಘಟ್ಟದಲ್ಲಿ ಚಿತ್ರ ವಿಚಿತ್ರ ಪ್ರಚಾರದ ಪಟ್ಟುಗಳ ಮೂಲಕ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವ ದುರಾದೃಷ್ಟಕರ ಘಟನಾವಳಿಗಳು ಎಗ್ಗಿಲ್ಲದೆ ನಡೆಯುತ್ತಿವೆ. ಇಂಥಾ ವ್ಯಾಧಿ ಉಲ್ಬಣಿಸಿರೋದು ಸೂರಿ ಅಣ್ಣನ ಮಗ್ಗುಲಲ್ಲಿ. ಕ್ರಿಯಾಶೀಲ ಪ್ರಚಾರದ ಎದೆಮೇಲೀಗ ಅರೆಹುಚ್ಚರ ಕಥಕ್ಕಳಿ ಕಂಡು ಸಿನಿಮಾ ಪ್ರೇಮಿಗಳೆಲ್ಲ ಬೆಚ್ಚಿಬಿದ್ದಿದ್ದಾರೆ!
ಸಲಗ ಚಿತ್ರದ ಸೂರಿ ಅಣ್ಣನಾಗಿ ಪ್ರಸಿದ್ಧಿ ಪಡೆದಿದ್ದ ದಿನೇಶ್ ಅಲಿಯಾಸ್ ಸೂರಿ ಈ ಚಿತ್ರವನ್ನು ನಿರ್ದೇಶನ ಮಾಡಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡು, ನಾಯಕನಾಗಿಯೂ ನಟಿಸಿದ್ದಾನೆ. ಒಂದಷ್ಟು ಮಂದಿ ರಿಯಲ್ ರೌಡಿಗಳನ್ನು ತಾರಾಗಣಕ್ಕೆ ಗುಡ್ಡೆ ಹಾಕಿಕೊಳ್ಳುವ ಮೂಲಕ ಸೂರಿ ಅಣ್ಣ ಆರಂಭದಿಂದಲೂ ಸದ್ದು ಮಾಡುತ್ತಾ ಬಂದಿದ್ದ. ಓಂ ನಂತರ ತನ್ನದೇ ದಾಖಲೆ ಎಂಬಂತೆ ತೋರಿಸಿಕೊಂಡು ಬಂದಿದ್ದ ಸೂರಿ ಅಣ್ಣ ಈಗ ಸಿನಿಮಾ ಮಂದಿರಕ್ಕೆ ಬಂದು, ಯಾವ ಕ್ಷಣದಲ್ಲಾದರೂ ಸಂಪೂರ್ಣವಾಗಿ ಎಗರಿಕೊಳ್ಳುವ ಭಯದಲ್ಲಿ ಗೇಟಿನಂಚಿಗೆ ಬಂದು ನಿಂತಿದ್ದಾನೆ. ಒಂದೊಳ್ಳೆ ಚಿತ್ರಕ್ಕೂ ಕೂಡಾ ಒಂದಷ್ಟು ಸವಾಲೆದುರಾಗೋದಿದೆ. ಬರಖತ್ತಾಗಬಹುದಾದ ಸಿನಿಮಾಗಳೇ ವಾರ ಕಳೆಯೋ ಮುನ್ನವೇ ಸಿನಿಮಾ ಮಂದಿರಗಳಿಂದ ಮಾಯವಾದ ಉದಾಹರಣೆಗಳೂ ಇದ್ದಾವೆ. ಹಾಗಂಥ ಅಂಥಾ ಸಿನಿಮಾ ತಂಡದವರ್ಯಾರೂ ಸೂರಿ ಅಣ್ಣನ ರೀತಿ ಥರ್ಡ್ ಕ್ಲಾಸ್ ಗಿಮಿಕ್ಕುಗಳ ಮೊರೆ ಹೋಗಿರಲಿಲ್ಲ ಅನ್ನೋದೂ ಅಷ್ಟೇ ಸತ್ಯ!
ಚಿತ್ರೀಕರಣದ ಹಂತದಲ್ಲಿಯೇ ವಸೂರಿಯಣ್ಣನ ಗಿಮಿಕ್ಕುಗಳಿಗೆ ಚಾಲನೆ ಸಿಕ್ಕಿತ್ತು. ಅದ್ಯಾವನೋ ರೌಡಿಯೋರ್ವ ಶೂಟಿಂಗ್ ಸ್ಪಾಟಿಂಗೆ ಬಂದು ಕಿರಿಕ್ ಮಾಡೋ ಸನ್ನಿವೇಶ ಸೃಷ್ಟಿಸುವ ಮೂಲಕ ಒಂದು ಮಟ್ಟಿಗೆ ಪ್ರಚಾರ ಪಡೆದುಕೊಂಡಿದ್ದ. ಅದಾದೇಟಿಗೆ ರೌಡಿಶೀಟರ್ ಯಶಸ್ವಿನಿ ಎಂಟ್ರಿ ಕೊಟ್ಟಿದ್ದಳು. ಹೆಣ್ಣುಮಕ್ಕಳನ್ನು ಹೀಗಳೆಯುವ ಡೈಲಾಗ್ ವಿರುದ್ಧ ಸೂರಿಅಣ್ಣನನ್ನು ಬೆಂಡೆತ್ತುವ ಮಾತಾಡೋ ಮೂಲಕ ಸೀದಾ ಜೈಲು ಪಾಲಾಗಿ ಬಿಟ್ಟಿದ್ದಳು. ಅದಾದ ನಂತರ ಸೂರಿ ಅಣ್ಣನ ಬತ್ತಳಿಕೆಯಿಂದ ಹೊರ ಬಂದ ಮೊಂಡು ಬಾಣ ಅಮುಕುಡುಮುಕು ಎಂಬೋ ಗಾಂಜಾ ಗಿರಾಕಿ. ಈ ಅಯೋಗ್ಯ ಒಂದೇ ಡೈಲಾಗನ್ನು ವಿಕಾರವಾಗಿ ಅರಚುತ್ತಾ ಒಂದಿಡೀ ಕರ್ನಾಟಕಕ್ಕೇ ಬವಳಿ ಬರಿಸಿದ್ದಾನೆ. ಇಂಥವನು ಪೆಟ್ರೋಲ್ ಕುಡಿಯೋ ನಾಟಕವಾಡೋ ಮೂಲಕ ವಿಕೃತ ಪ್ರಚಾರದ ಪಟ್ಟುಗಳು ಪೊಲೀಸ್ ಇಲಾಖೆಯ ಗಮನ ಸೆಳೆಯುವಂತೆ ಮಾಡಿದೆ.
ಅಮುಕುಡುಮುಕು ಮಂಜ, ಅವನ್ಯಾರೋ ತಲೆಮಾಸಿದ ನವಾಜ್ ಸೇರಿದಂತೆ ಒಂದಷ್ಟು ಮಂದಿಯನ್ನಿಟ್ಟುಕೊಂಡು ಸೂರಿ ಪ್ರೇಕ್ಷಕರೊಳಗೊಂದು ರೇಜಿಗೆ ಮೂಡಿಸಿ ಬಿಟ್ಟಿದ್ದಾನೆ. ಅಯೋಗ್ಯ ಅಮುಕು ಡುಮುಕ ಸಿನಿಮಾ ಮಂದಿರದ ಖಾಲಿ ಸೀಟುಗಳ ಮುಂದೆ ಪಾಪನಿವೇದನೆ ಮಾಡಿಕೊಳ್ಳುವ ಮೂಲಕ ಸೂರಿ ಅಣ್ಣನನ್ನು ನಿಖಾಲಿಯಾಗಿಸುವಲ್ಲಿಗೆ ಈ ವಿಕೃತ ಪ್ರಚಾರದ ಪಟ್ಟುಗಳು ಪರ್ಯಾವಸಾನ ಹೊಂದಿವೆ. ಕೆಜಿಎಫ್ ಸಿನಿಮಾ ನೋಡಿ ಅದ್ಯಾವನೋ ತೆಲುಗುವಾಳ್ಳುವೊಬ್ಬ ಕಣ್ಣಲ್ಲಿ ನೀರು ಸುರಿಸುತ್ತಾ ರಿವ್ಯೂ ಕೊಟ್ಟಿದ್ದ. ಅದನ್ನು ನೋಡಿ ನವಾಜ್ ಎಂಬೋ ಕೊಳಕುಮಂಡಲವೊಂದು ಪೊದೆಯಿಂದ ಆಚೆ ಬಂದು ಏಕಾಏಕಿ ಚಿತ್ರಮಂದಿರಗಳ ಮುಂದೆ ಪ್ರತ್ಯಕ್ಷವಾಗಿತ್ತು. ದುರಂತವೆಂದರೆ ಒಂದಷ್ಟು ಸಿನಿಮಾ ತಂಡಗಳು ಖುದ್ದಾಗಿ ನವಾಜನನ್ನು ಕರೆಸಿ ರಿವ್ಯೂ ಕೊಡಿಸಲಾರಂಭಿಸಿದ್ದವು. ಬರಗೆಟ್ಟ ಕೆಲ ಯು ಟ್ಯೂಬ್ ಚಾನೆಲ್ಲುಗಳು ನವಾಜನನ್ನು ಫೋಕಸ್ ಮಾಡಿತ್ತಾ ವ್ಯೂವ್ಸ್ ಹೆಚ್ಚಿಸಿಕೊಳ್ಳುವ ಕಸರತ್ತು ನಡೆಸಿದ್ದವು. ಇಂಥಾ ಅವಿವೇಕಿಗೆ ಕಿಚ್ಚನ ಸಾರಥ್ಯದ ಬಿಗ್ ಬಾಸ್ನಲ್ಲಿ ಅವಕಾಶ ಕೊಟ್ಟಿದ್ದೇ ಈ ಶತಮಾನದ ಘೋರ ದುರಂತ!
ಈಗ ಕಂಡ ಕಂಡಲ್ಲಿ, ನಾನಾ ಅವತಾರದಲ್ಲಿ ಪಿತಗುಡುತ್ತಿರುವ ಅಮುಕುಡುಮುಕುಗಳೆಲ್ಲ ಅಂಥಾದ್ದೊಂದು ದುರಂತದ ನಡುವೆ ಹುಟ್ಟಿಕೊಂಡ ವಿಚಿತ್ರ ಶಿಶುಗಳೆಂಬುದು ಸತ್ಯ. ಇಂಥವರಿಂದ ಸಿನಿಮಾಗಳಿಗೆ ಹಿನ್ನಡೆಯೇ ಹೆಚ್ಚೆಂಬುದು ಸಿನಿಮಾ ಮಂದಿಗೆ ಅರ್ಥವಾಗಿತ್ತು. ಆದರೆ, ರೌಡಿಗಳನ್ನು ಗುಡ್ಡೆ ಹಾಕಿಕೊಂಡು ಸಿನಿಮಾ ಮಾಡಿದ್ದ ಸೂರಿ ಅಣ್ಣನಿಗೆ ಮಾತ್ರ ಆ ಸತ್ಯದ ಅರಿವಾಗಿರಲಿಲ್ಲ. ಇಂಥಾ ವಿಕ್ಷಿಪ್ತ ವಿಕೃತ ಆಸಾಮಿಗಳನ್ನು ಮುಂದಿಟ್ಟುಕೊಂಡು, ಸವಕಲು ಗಿಮಿಕ್ಕುಗಳನ್ನು ಮಾಡುತ್ತಾ ಸೂರಿ ಅಣ್ಣ ತನ್ನ ಗುಂಡಿಯನ್ನು ತಾನೇ ತೋಡಿಕೊಂಡಿದ್ದಾನೆ. ಈಗ ಸೂರಿ ಅಣ್ಣನ ಶೋ ಇರುವ ಸಿನಿಮಾ ಮಂದಿರಗಳಲ್ಲಿ ಅಮುಕುಡುಮುಕು ಮಂಜ ಸೂರಿ ಅಣ್ಣನ ಜೊತೆ ನೊಣ ಹೊಡೆಯುವಂಥಾ ಸ್ಥಿತಿ ನಿರ್ಮಾಣಗೊಂಡಿದೆ. ಸಿನಿಮಾ ಮಂದಿ ಇನ್ನಾದರೂ ನವಾಜ್, ಅಮುಕುಡುಮುಕು ಮಂಜ ಮುಂತಾದ ಅಯೋಗ್ಯರನ್ನು ದೂರವಿಟ್ಟರೆ, ಬಡಪಾಯಿ ಪ್ರೇಕ್ಷಕರು ಸಿನಿಮಾ ಮಂದಿರದತ್ತ ಧಾವಿಸುವ ಧೈರ್ಯ ಮಾಡಬಹುದೇನೋ…
keywords: suri anna movie, cheap publicity gimmick, amukudumuku

