ಒಂದೇ ಒಂದು ಸಲ ಪ್ರಸಿದ್ಧಿ ಎಂಬುದು ಸಿಕ್ಕಿ ಬಿಟ್ಟರೆ ಚಿತ್ರರಂಗದಲ್ಲಿ ಅಂಥವರ ನಾಗಾಲೋಟವನ್ನು ಯಾರಿಂದಲೂ ಹಿಡಿದಿಡಲು ಸಾಧ್ಯವಿಲ್ಲ. ಕಾಸೆಂಬ ಮಾಯೆಗೆ ಅಂಥವರ ನೇರ ವಿಳಾಸ ಸಿಕ್ಕಿಬಿಡುತ್ತದೆ. ಈ ಮಾತಿಗೆ ತಕ್ಕುದಾದ ಉದಾಹರಣೆಗಳು ಚಿತ್ರರಂಗದಲ್ಲಿ ಸಾಕಷ್ಟು ಸಿಗುತ್ತದೆ. ಆದರದಕ್ಕೆ ತಾಜಾ ಉದಾಹರಣೆಯಂತಿರುವವರು ತಲೈವಾ (rajanikanth)  ರಜನೀಕಾಂತ್. ಒಂದು ಕಾಲದಲ್ಲಿ ಸಾಮಾನ್ಯ ಬಸ್ ಕಂಡಕ್ಟರ್ ಆಗಿದ್ದ ರಜನಿ, ಈವತ್ತಿಗೆ ತಲುಪಿಕೊಂಡಿರುವ ಎತ್ತರ ಊಹೆಗೂ ನಿಲುಕದ್ದು. ಒಂದು ಹಂತದಲ್ಲಿ ಚಿಲ್ಲರೆ ಕಾಸಿಗೆ ತಡಕಾಡುತ್ತಿದ್ದ ಕೈ ಈವತ್ತಿಕೆ ಕ್ಷಣವೊಂದಕ್ಕೆ ಕೋಟಿ ಎಣಿಸೋ ಹಂತ ತಲುಪಿಕೊಂಡಿರೋದು ಅಚ್ಚರಿ ಮಾತ್ರವಲ್ಲ; ಏನಾದರೊಂದು ಸಾಧಿಸುವ ಛಲಕ್ಕೆ ಬೂಸ್ಟರ್ ಡೋಸ್ ಕೂಡಾ ಹೌದು!

ಅಷ್ಟಕ್ಕೂ ರಜನಿ ಸ್ಟಾರ್ ವ್ಯಾಲ್ಯೂ ಮುಂದೆ ಕೋಟಿಗಳೂ ಕಿಮ್ಮತ್ತು ಕಳೆದುಕೊಂಡಿವೆ. ಅವರು ತಮ್ಮ ಮಗಳು ಐಶ್ವರ್ಯಾ ನಿರ್ದೇಶನ ಮಾಡಿರುವ ಸಿನಿಮಾದ ಗೆಸ್ಟ್ ಅಪಿಯರೆನ್ಸಿಗಾಗಿ ಪಡೆದುಕೊಂಡ ಸಂಭಾವನೆಯ ಮೊತ್ತ ಕೇಳಿ ಜನ ಸಾಮಾನ್ಯರಿರಲಿ; ಖುದ್ದು ಸ್ಟಾರ್ ನಟರೇ ಅವಾಕ್ಕಾಗಿದ್ದರೂ ಅಚ್ಚರಿಯೇನಿಲ್ಲ. ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದಲ್ಲಿ ರಜನೀಕಾಂತ್ ಅತಿಥಿ ಪಾತ್ರ ಮಾಡಿರುವ ವಿಚಾರ ಈ ಹಿಂದೆಯೇ ಜಾಹೀರಾಗಿತ್ತು. ಆ ಪಾತ್ರದ ಅವಧಿ ಹದಿನೈದಿಪ್ಪತ್ತು ನಿಮಿಷಗಳ ಕಾಲ ಇರಬಹುದಷ್ಟೇ. ಆದರೆ, ಅದಕ್ಕಾಗಿ ರಜನೀಕಾಂತ್ ಪಡೆದಿರುವ ಸಂಭಾವನೆ ಭರ್ತಿ ನಲವತ್ತು ಕೋಟಿ!

ಈ ಬಗ್ಗೆ ಸದ್ಯ ಎಲ್ಲೆಡೆ ಸಿನಿಮಾ ಪ್ರೇಮಿಗಳು, ಸಿನಿಮಾ ಜಗತ್ತಿನ ಭಾಗವಾಗಿರುವ ಮಂದಿ ಭರ್ಜರಿಯಾಗಿಯೇ ಚರ್ಚೆ ನಡೆಸುತ್ತಿದ್ದಾರೆ. ಅಂದಹಾಗೆ, ಇದು ಕ್ರಿಕೆಟ್ ಆಟದ ಸುತ್ತಾ ಜರುಗೋ ಉನ್ಮಾದದ ಕಥೆ ಇರುವ ಚಿತ್ರ. ಕ್ರಿಕೆಟ್ ಪಂದ್ಯಾಟದ ನಡುವೆಯೇ ದ್ವೇಷದ ಕಿಡಿ ಹೊತ್ತಿಕೊಂಡು ಹೇಗೆಲ್ಲ ಧಗಧಗಿಸುತ್ತೆ, ಅದು ಯಾವೆಲ್ಲ ಪಲ್ಲಟಗಳಿಗೆ ಕಾರಣವಾಗುತ್ತೆಂಬುದು ಕಥಾ ವಸ್ತುವಂತೆ. ಈ ಬಗ್ಗೆ ಖುದ್ದು ರಜನೀಕಾಂತ್ ಅವರೇ ಥ್ರಿಲ್ ಆಗಿ ಮಾತಾಡಿದ್ದಾರೆ. ಹೆಚ್ಚೇನೂ ಸುದ್ದಿಯಲ್ಲಿರದ ಈ ಸಿನಿಮಾ ರಜನೀ ಕಾರಣದಿಂದಲೇ ಸದ್ದು ಮಾಡುತ್ತಿದೆ. ಕಡಿಮೆ ಅವಧಿಯದ್ದಾದರೂ ಅವರ ಪಾತ್ರವಿಲ್ಲಿ ನಿರ್ಣಾಯಕವಂತೆ. ಸದ್ಯ ಅದರ ಅಸಲೀ ಛಾಯೆಯನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾಯಲಾರಂಭಿಸಿದ್ದಾರೆ. ಈ ಚಿತ್ರ ಇದೇ ವಾರ ಬಿಡುಗಡೆಗೊಳ್ಳಲಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!