ಕಿರುತೆರೆ ಎಂಬುದು ನಮ್ಮ ರಾಜ್ಯದ ಮಟ್ಟಿಗೆ ಜನರ ಭಾವಕೋಶದಲ್ಲಿ ಬಹು ಆಳವಾಗಿ ಬೇರೂರಿಕೊಂಡಿದೆ. ಟೀವಿ ಎಂಬುದೇ ಹೊಸತೆನ್ನಿಸಿದ ಕಾಲಘಟ್ಟದಿಂದಲೂ ಕಿರುತೆರೆ ಎಂಬುದೊಂದು ಬೆರಗು. ಹಾಗೆ, ಟೀವಿಯೇ ಮಹಾನ್ ಲಕ್ಷುರಿ ವಸ್ತು ಅನ್ನಿಸಿದ ತೊಂಬತ್ತರ ದಶಕದಿಂದ ಇಲ್ಲಿಯವರೆಗೂ ಯಾರಾದರೂ ಕಲಾವಿದರು ಚಾಲ್ತಿಯಲ್ಲಿದ್ದಾರೆಂದರೆ ಅವರ ಬಗೆಗೊಂದು ಬೆರಗು ಮೂಡಿಕೊಳ್ಳೋದು ಸಹಜ. ಅಂಥಾದ್ದೊಂದು ಬೆರಗಿನ ರೂವಾರಿಯಂತೆ ಕಾಣಿಸುತ್ತಿರುವವರು (harini shrikanth) ಹರಿಣಿ ಶ್ರೀಕಾಂತ್. ಹಲವಾರು ಸಿನಿಮಾ, ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಮೂಲಕ ಗಮನ ಸೆಳೆದಿರುವ ಹರಿಣಿ ಪ್ರಧಾನವಾಗಿ ಗುರುತಾಗಿರೋದು ಅಮ್ಮನ ಪಾತ್ರಗಳ ಮೂಲಕ. ಅವರೀಗ ರಾಜ್ ಗುರು ನಿರ್ದೇಶನದ `ಕೆರೆಬೇಟೆ’ ಚಿತ್ರದ ಮೂಲಕ ಮತ್ತೆ ಅಮ್ಮನ ಪಾತ್ರದಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ.

ಹರಿಣಿ ಪಾಲಿಗೆ ಸಿನಿಮಾರಂಗವಾಗಲಿ, ಅಮ್ಮನ ಪಾತ್ರಗಳಾಗಲಿ ಹೊಸತೇನೂ ಅಲ್ಲ. ಆದರೆ ಸಿನಿಮಾದಿಂದ ಸಿನಿಮಾಗೆ ಬೇರೆ ತೆರನಾದ ಸವಾಲುಗಳಿರುವ ಚೆಂದದ ಪಾತ್ರಗಳು ಸಿಗಲಿ ಎಂಬ ಹಂಬಲವೊಂದು ಅವರೊಳಗಿದೆ. ಅಂಥಾ ಬಯಕೆಯೊಂದು ಕೆರೆಬೇಟೆಯ ಮೂಲಕ ಈಡೇರಿದ ಖುಷಿ ಅವರಲ್ಲಿದೆ. ಈ ಸಿನಿಮಾದಲ್ಲಿ ಹರಿಣಿ ನಾಯಕನ ತಾಯಿಯಾಗಿ ನಟಿಸಿದ್ದಾರೆ. ಅದು ಮಲೆನಾಡಿನ ಭಾಷೆ, ಗುಣ ಲಕ್ಷಣಗಳನ್ನು ಎರಕ ಹೊಯ್ದಂತಿರುವ ಪಾತ್ರ. ಟಿಪಿಕಲ್ ಮಲೆನಾಡು ಶೈಲಿಯ ಹೆಣ್ತನದ ಚಹರೆಗಳಿರುವ ಆ ಪಾತ್ರವನ್ನು ಜೀವಿಸಿದಂತೆ ನಟಿಸಿದ ಖುಷಿ ಹರಿಣಿ ಅವರಲ್ಲಿದೆ.

ಹಾಗೆನೋಡಿದರೆ, ಹರಿಣಿ ಮಲೆನಾಡಿಗೆ ಅಪರಿಚಿತರೇನಲ್ಲ. ಅವರ ಮೂಲವಿರೋದೇ ಚಿಕ್ಕಮಗಳೂರು ಜಿಲ್ಲೆಯಲ್ಲಿ. ಅವರ ಪೂರ್ವಜರೆಲ್ಲ ಬದುಕಿ ಬಾಳಿರುವುದು ಮಲೆನಾಡ ನೆಲದಲ್ಲಿಯೇ. ಆದರೆ, ಹರಿಣಿ ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿದ್ದರಿಂದ ಅಪ್ಪಟ ಅಲ್ಲಿನವರೇ ಆಗಿ ಹೋಗಿದ್ದಾರೆ. ಬದುಕು ಎಲ್ಲಿ ನೆಲೆ ಕಂಡುಕೊಂಡರೂ ಹುಟ್ಟಿದೂರಿನ ಸೆಳೆತವೊಂದನ್ನು ಸದಾ ಕಾಪಿಟ್ಟುಕೊಂಡಿರುವ ಹರಿಣಿ, ತನ್ನೂರಿನ ಗಟ್ಟಿಗಿತ್ತಿಯ ಪಾತ್ರವನ್ನು ಸಂಭ್ರಮಿಸಿಕೊಂಡು ನಟಿಸಿದ್ದಾರಂತೆ. ಚಿತ್ರೀಕರಣದ ಸಂದರ್ಭದಲ್ಲಿ ಅಪ್ಪಟ ಮಲೆನಾಡು ವಾತಾವರಣದಲ್ಲಿ ಕಲೆತು ಬದುಕುವ ಅವಕಾಶ ಸಿಕ್ಕಿದ್ದೇ ಅದೃಷ್ಟವೆಂಬ ಧನ್ಯತಾ ಭಾವ ಅವರಲ್ಲಿದೆ.

ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!