ಸಿನಿಮಾ ರಂಗಕ್ಕೆ ರಾಜಕೀಯ, ಸೈದ್ಧಾಂತಿಕ ಸಂಘರ್ಷಗಳ ನೆರಳು ಬಿದ್ದು ಒಂದಷ್ಟು ವರ್ಷಗಳೇ ಕಳೆದು ಹೋಗಿವೆ. ಆದರೆ, ನೆರೆಯ ತಮಿಳುನಾಡು, ಆಂಧ್ರಪ್ರದೇಶದಂಥಾ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಅದರ ಪ್ರಮಾಣ ತುಸು ಕಡಿಮೆ ಇದ್ದಂತಿತ್ತು. ನಾನಾ ಭಾಗ್ಯಗಳ ಮೂಲಕ ಹೆಸರಾಗಿರುವ ಸಿಎಂ ಸಿದ್ದರಾಮಯ್ಯ ಇದೀಗ ಸಿನಿಮಾ ರಾಜಕೀಯ ಪ್ರೇರಿತ ಪ್ರಚಾರದ ಭಾಗ್ಯ ಕರುಣಿಸಿದ್ದಾರೆ. ಇದರ ಭಾಗವಾಗಿ ತನ್ನ ಬಲಗೈ ಭಂಟನಂತಿರೋ ಸಚಿವ ಜಮೀರ್ ಅಹ್ಮದ್ ಖಾನ್ ಸುಪುತ್ರ ಝೈದ್ ಖಾನ್ ನಟನೆಯ ಕಲ್ಟ್ ಸಿನಿಮಾವನ್ನು ಹಾಡಿ ಹೊಗಳುವ ಮೂಲಕ ತನ್ನ ಘನತೆಗೆ ತಾನೇ ಕುಂದಾಗುವಂತೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯನವರು ಸಿನಿಮಾ ಪ್ರೇಮಿಯೇನಲ್ಲ. ಅವರು ಸಿನಿಮಾಗಳನ್ನು ನೋಡಿ ಸಂಭ್ರಮಿಸೋದು ತೀರಾ ವಿರಳ. ಇತ್ತೀಚೆಗಷ್ಟೇ ಲ್ಯಾಂಡ್ ಲಾಡ್ ಚಿತ್ರ ನೋಡೋದಾಗಿ ಹೇಳಿಕೊಂಡಿದ್ದ ಸಿದ್ದು, ಅದಕ್ಕೂ ಮುನ್ನವೇ ಜಮೀರ್ ಪುತ್ರನ ಕಲ್ಟ್ ಮೂವಿ ನೋಡಿದ್ದಾರೆ. ಇದೊಂದು ಹೊಸ ಮಾದರಿಯ ಚಿತ್ರ ಎಂಬ ಅಭಿಪ್ರಾಯ ಪ್ರಕಟಿಸುವ ಮೂಲಕ ಸಿನಿಮಾ ಪ್ರೇಮಿಗಳನ್ನು ಕಂಗಾಲಾಗಿಸಿದ್ದಾರೆ!
ಸೀರಿಯಸ್ ಕಾಮಿಡಿ
ರಾಜಕಾರಣಿಗಳು ಆಗಾಗ ಸಿನಿಮಾ ನೋಡೋದೇನೂ ಹೊಸತಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ, ಕರ್ನಾಟಕ ಕಂಡ ಅತ್ಯಂತ ಅಸಮರ್ಥ ಮುಖ್ಯಮಂತ್ರಿಯೆಂಬ ಕುಖ್ಯಾತಿ ಗಳಿಸಿದ್ದ ಬಸವರಾಜ ಬೊಮ್ಮಾಯಿಯಂತೂ ಸಿನಿಮಾ ನೋಡೋದು, ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳೋದನ್ನೇ ಕಸುಬಾಗಿಸಿಕೊಂಡಿದ್ದನ್ನು ಕರುನಾಡು ಕಂಡಿದೆ. ಹಾಗಿರುವಾಗ ಸಿದ್ದರಾಮಯ್ಯ ಸಿನಿಮಾವೊಂದನ್ನು ನೋಡೋದಾಗಲಿ, ಆ ಬಗ್ಗೆ ವಿಮರ್ಶೆ, ಅಭಿಪ್ರಾಯ ಹಂಚಿಕೊಳ್ಳೋದಾಗಲಿ ತಪ್ಪೇನಲ್ಲ. ಆದರೆ, ಅವರು ನೋಡಿದ್ದು ಎಂಥಾ ಸಿನಿಮಾವನ್ನು? ಅವರ ಕಡೆಯಿಂದ ವ್ಯಕ್ತವಾಗುತ್ತಿರೋದು ಯಾವ ಬಗೆಯ ಅಭಿಪ್ರಾಯ ಎಂಬುದಿಲ್ಲಿ ಮುಖ್ಯವಾಗುತ್ತೆ. ಈ ನಿಟ್ಟಿನಲ್ಲಿ ನೋಡ ಹೋದರೆ, ಕಲ್ಟ್ ವಿಚಾರದಲ್ಲಿ ಸಿದ್ದಣ್ಣನದ್ದು ಪಕ್ಕಾ ರಾಜಕೀಯ ಮರ್ಜಿಗೆ ಬಿದ್ದ ನಡೆಯೆಂಬುದು ಖುಲ್ಲಂಖುಲ್ಲ ಖಾತರಿಯಾಗುತ್ತೆ.
ಝೈದ್ ಖಾನ್ ತನ್ನ ತೋಪು ಸರಕನ್ನು ಗೆಲ್ಲಿಸಲು ಏನೇನು ಬೇಕೋ ಅಂಥಾ ಎಲ್ಲ ಕಸರತ್ತುಗಳನ್ನು ನಡೆಸುತ್ತಿದ್ದಾನೆ. ಹಾಗೆ ನೋಡಿದರೆ, ಬಿಡುಗಡೆಯಾಗಿ ಎರಡನೇ ದಿನ ಹೊರಳಿಕೊಳ್ಳುವಷ್ಟರಲ್ಲಿ, ಜಮೀರ್ ಮಗನ ಕಲ್ಟ್ ಸೋಲಿನ ಕಮರಿಯತ್ತ ಉರುಳಿಕೊಂಡಿತ್ತು. ಪ್ರಚಾರವನ್ನು ಊರಗಲ ನಡೆಸುವ ಮಂದಿ ಕಂಟೆಂಟನ್ನು ನಿರಾಸೆಯಾಗದ ರೀತಿಯಲ್ಲಿ ಕಟ್ಟಿ ಕೊಡಬೇಕಾಗುತ್ತೆ. ಆದರೆ, ಕಲ್ಟ್ ಎಂಬುದು ಎಲ್ಲೆಲ್ಲಿಂದಲೋ ಬಿಡಿಬಿಡಿ ದೃಷ್ಯಗಳನ್ನು ಯಥಾವತ್ತಾಗಿ ಎತ್ತಿಕೊಂಡು ಮಾಡಿರುವ ಹಳಸಲು ಚಿತ್ರಾನ್ನದಂಥಾ ಸಿನಿಮಾ. ಇಂಥಾ ಚಿತ್ರವನ್ನು ನೋಡಿದ ಸಿದ್ದರಾಮಯ್ಯ ಸೀದಾ ಎದ್ದು ಮನೆಗೆ ತೆರಳಿ ದಣಿವಾರಿಸಿಕೊಂಡಿದ್ದರೆ ಟ್ರೋಲಾಗೋದಾದರೂ ತಪ್ಪುತ್ತಿತ್ತು. ಆದರೆ, ಅವರು ಕಲ್ಟ್ ಇತ್ತೀಚಿನ ಸಿನಮಾನದ ಹೊಸಾ ಮಾದರಿಯ ಚಿತ್ರ ಅಂತೆಲ್ಲ ಕೊಂಡಾಡಿದ್ದಾರೆ. ಕುಟುಂಬ ಸಮೇತರಾಗಿ ನೋಡುವ ಚಿತ್ರ ಎಂಬಂತೆ ಪ್ರಮೋಷನ್ನು ನಡೆಸಿದ್ದಾರೆ. ಅದಾಗಲೇ ಕಲ್ಟ್ ಚಿತ್ರ ನೋಡಿ ಕಂಗಾಲೆದ್ದಿದ್ದ ಒಂದಷ್ಟು ಬಡಪಾಯಿ ಪ್ರೇಕ್ಷಕರ ಪಾಲಿಗೆ ಸಿದ್ದಣ್ಣನ ಮಾತುಗಳೆಲ್ಲವೂ ಅಕ್ಷರಶಃ ಕಾಮಿಡಿಯಂತೆ ಕೇಳಿಸಿದ್ದರೆ ಅಚ್ಚರಿಯೇನಿಲ್ಲ!

ಭಟ್ಟಿಯಿಳಿಸಿದ ಸರಕು
ಇಡೀ ರಾಜ್ಯದಲ್ಲಿ ಸಮಸ್ಯೆಗಳು ನಡಮುರಿದುಕೊಂಡು ಬಿದ್ದಿವೆ. ಇಂಥಾ ದುರಿತ ಕಾಲದಲ್ಲಿ ಪ್ರಯೋಗಾತ್ರಮಕ ಗುಣ ಹೊಂದಿರುವ, ಪ್ರೇಕ್ಷಕರಿಗೆ ಇಷ್ಟವಾಗಿರುವ ಸಿನಿಮಾವೊಂದರ ಬಗ್ಗೆ ಸಿದ್ದರಾಮಯ್ಯ ವಕಾಲತ್ತು ವಹಿಸಿದ್ದರೆ ಆ ಕಥೆ ಬೇರೆಯದು. ಆದರೆ, ಸಿದ್ದಣ್ಣ ನೋಡಿದ್ದು ಮತ್ತು ಮಾತಾಡಿದ್ದು ಅದಾಗಲೇ ಜನ ಮೂಲೆಗೆ ಗದುಮಿದ್ದ ಕಲ್ಟ್ ಚಿತ್ರದ ಬಗ್ಗೆ. ಸಿದ್ದರಾಮಯ್ಯನವರ ಮುಕ್ತಕಂಠದ ಮೆಚ್ಚುಗೆಗೂ, ಈ ಚಿತ್ರ ಮೂಡಿ ಬಂದಿರುವ ರೀತಿಗೂ ಏನ ಆದರೂ ಸೂತ್ರ ಸಂಬಂಧ ಇದೆಯಾ ಎಂಬ ನಿಟ್ಟಿನಿನಲ್ಲಿ ನೋಡ ಹೋದರೆ, ಅಲ್ಲೆದುರಾಗೋದು ಆಘಾತ ಮಾತ್ರ. ಯಾಕೆಂದರೆ, ಕಲ್ಟ್ ಎಂಬುದು ಒಂದು ಸಿನಿಮಾದ ಪಾಲಿಗೆ ಬೆನ್ನಹುರಿಯಂಥಾ ಕಥೆಯೇ ನೆಟ್ಟಗಿಲ್ಲದ ಚಿತ್ರ. ಹೇಗೋ ಆರಂಭವಾಗುತ್ತೆ. ಮತ್ಯಾವ ದಿಕ್ಕಿನಲ್ಲೋ ಕದಲುತ್ತೆ. ಹಿಂದೆ ನೋಡಿದ್ದಕ್ಕೂ, ಕಣ್ಣೆದುರು ಚಲಿಸುವ ದೃಷ್ಯಗಳಿಗೂ ಕನೆಕ್ಷನ್ನೇ ಸಿಗದೆ ಪ್ರೇಕ್ಷಕರು ಕಂಗಾಲಾಗುವಂತಿದೆ.
ಈ ಸಿನಿಮಾದಲ್ಲಿ ನಾನಾ ಸಿನಿಮಾಗಳ ನೇರ ನೆರಳಿದೆ. ಮೊದಲಾರ್ಧದ ತುಂಬೆಲ್ಲ ಕಳೆದ ವರ್ಷ ತೆರೆಗಂಡು ಸೂಪರ್ ಹಿಟ್ ಆಗಿದ್ದ ತೆಲುಗು ಚಿತ್ರ ಬೇಬಿಯ ಇರುವಿಕೆ ಕಾಣುತ್ತೆ. ಒಂದಷ್ಟು ಭಾಗಗಳಲ್ಲಿ ಇದು ಬೇಬಿಯ ರೀಮೇಕ್ ಇರಬಹುದಾ ಅಂತೊಂದು ಗುಮಾನಿಯೂ ಕಾಡುತ್ತೆ. ಆದರೆ, ಈ ವಿಚಾರದಲ್ಲಿ ನಿರ್ದೇಶಕರು ಗಣನೀಯವಾಗಿ ತಮ್ಮ ಕ್ರಿಯೇಟಿವಿಟಿಯನ್ನು ಪ್ರಯೋಗಿಸಿದ್ದಾರೆ. ಅದರ ಫಲವಾಗಿಯೇ ಬೇಬಿಯಲ್ಲಿ ಹುಡುಗಿಯ ಚಹರೆ ಕಲ್ಟ್ನಲ್ಲಿ ನಾಯಕನ ಪಾಲಾಗಿದೆ. ಇನ್ನು ದ್ವಿತೀಯಾರ್ಧದಲ್ಲಿ ಬಾಲಿವುಡ್ಡಿನ ವಿವಾದಾತ್ಮಕ ಚಿತ್ರ ಅನಿಮಲ್ನ ದೃಷ್ಯಗಳು ಮಕ್ಕಿಕಾಮಕ್ಕಿ ಕಾಣಿಸಿಕೊಂಡು ಪ್ರೇಕ್ಷಕರನ್ನು ದಿಗಿಲುಗೊಳಿಸುತ್ತವೆ. ಈ ಹಿಂದೆ ಝೈದ್ ಖಾನ್ ತನಗೆ ಅನಿಮಲ್ ಚಿತ್ರ ಇಷ್ಟ ಅಂತ ಹೇಳಿಕೊಂಡಿದ್ದ. ಬಹುಶಃ ಎಳವೆಯಿಂದಲೂ ಬೇಕಿನಿಸಿದ್ದನ್ನು ಅಪ್ಪನ ಕಾಸಿನ ಬಲದಿಂದ ಪಡೆದುಕೊಂಡು ಅಭ್ಯಾಸವಿರೋ ಝೈದ್ ಸೂಚನೆಯ ಮೇರೆಗೇ ಹಿಂದಿಯ ಅನಿಮಲ್ಲು ಕಲ್ಟ್ಗೆ ಎಗರಿಕೊಂಡಿರಬಹುದು. ವಿಶೇಷವೆಂದರೆ, ಒಂದಷ್ಟು ಸಿನಿಮಾ ಮಂದಿ ಒಂದೊಳ್ಳೆ ಸಿನಿಮಾ ಕಥೆಯಿಂದ ಪ್ರೇರಿತರಾಗುತ್ತಾರೆ. ಆದರೆ, ಕಲ್ಟ್ ನಿರ್ದೇಶಕರು ದೃಷ್ಯಗಳನ್ನೇ ಭಟ್ಟಿ ಇಳಿಸಿದ್ದಾರೆ.

ಸಿದ್ದಣ್ಣನ ಕಣ್ಣೀರು
ಇನ್ನುಳಿದಂತೆ ಸಿದ್ದರಾಮಯ್ಯನವರು ಈ ಸಿನಿಮಾದ ದೃಷ್ಯಗಳನ್ನು ಕಂಡು ಕಣ್ಣೀರಾದ ಬಗ್ಗೆಯೂ ಸುದ್ದಿಗಳು ಹಬ್ಬಿಕೊಳ್ಳುತ್ತಿವೆ. ಸಿದ್ದರಾಮಯ್ಯನವರು ಹೇಳಿಕೇಳಿ ರಫ್ ಅಂಡ್ ಟಫ್ ವ್ಯಕ್ತಿತ್ವದವರು. ಸಹಜೀವಿಗಳು ಚುನಾವಣಾ ಸಂದರ್ಭದಲ್ಲಿ ಕಣ್ಣಿಗೆ ವಿಕ್ಸ್ ಮೆತ್ತಿಕೊಂಡು ಗಳಗಳನೆ ಅತ್ತರೂ, ಸಿದ್ದಣ್ಣ ಕಣ್ಣೀರನ್ನು ಅಸ್ತ್ರವಾಗಿಸಿಕೊಂಡವರಲ್ಲ. ಇಂಥಾ ಸಿಎಂ ಸಾಹೇಬರು ಕಣ್ಣೀರಾಗುವಂಥಾ, ಭಾವುಕವಾಗುವಂತಾ, ಇಲ್ಲವಾದ ಮಗನನ್ನು ನೆನೆಸಿಕೊಳ್ಳುವಂಥಾ ಯಾವ ದೃಷ್ಯಗಳು ಕಲ್ಟ್ ನಲ್ಲಿವೆ ಅಂತ ನೋಡ ಹೋದರೆ, ನಾಯಕ ಝೈದ್ ಖಾನ್ ಎದೆಯೊಡೆದುಕೊಂಡು ಎಣ್ಣೆ ಹೊಡೆಯುವ, ಡ್ರಗ್ಸ್ಗೆ ದಾಸನಾಗಿ ನರಳಿ ಸುಖಿಸುವ ಒಂದಷ್ಟು ದೃಷ್ಯಗಳು ಕಾಣಿಸುತ್ತವೆ. ಇಂಥಾ ದುರಂತಮಯ ಸನ್ನಿವೇಶಗಳೇ ಸಿದ್ದರಾಮಯ್ಯನವರಿಗೆ ಮಗನನ್ನು ನೆನಪಾಗಿಸಿ ಕಣ್ಣೀರು ಹನಿದಿರಬಹುದಾ? ಓರ್ವ ತಂದೆಯಾಗಿ ಅವರೊಳಗಿನ ಭಾವುಕತೆಯನ್ನು ಪ್ರಶ್ನಿಸುವಂತಿಲ್ಲ!
ಆದರೆ, ಪ್ರಶ್ನೆ ಎದ್ದಿರೋದು ಹಾಗೂ ಇಲ್ಲದ, ಎಲ್ಲಿಯೂ ಸಲ್ಲದ ಸಿನಿಮಾವೊಂದನ್ನು ರಾಜಕೀಯ ಪ್ರೇರಿತವಾಗಿ ಸಿದ್ದರಾಮಯ್ಯನವರು ಪ್ರಮೋಟ್ ಮಾಡಿರೋದರ ಬಗ್ಗೆ. ಕಲ್ಟ್ ಅನ್ನೋದೊಂದು ಪಕ್ಕಾ ಕಮರ್ಶಿಯಲ್ ಉದ್ದೇಶದ ಪಡಪೋಶಿ ಚಿತ್ರ. ಇದರ ಹಣೆಬರಹ ಎರಡು ದಿನ ಕಳೆಯೋದರೊಳಗಾಗಿ ಸಮಸ್ತರಿಗೂ ಗೊತ್ತಾಗಿ ಬಿಟ್ಟಿದೆ. ಹಾಗಾದರೆ, ಈ ಕ್ಷಣಕ್ಕೂ ಹೌಸ್ ಫುಲ್ ಪ್ರದರ್ಶನ ಅಂತೆಲ್ಲ ಸುದ್ದಿಯಾಗುತ್ತಿದೆಯಲ್ಲಾ ಅಂತೊಂದು ಪ್ರಶ್ನೆ ಕಾಡೋದು ಸಹಜ. ಇದರ ಹಿಂದೆ ಜಮೀರ್ ಮಗನ ಕಾಸಿನಾಟದ ಕಿಸುರಿದೆ. ಲಕ್ಷಗಟ್ಟಲೆ ಕಾಸು ಸುರಿದು, ಟಿಕೆಟ್ ಖರೀದಿಸಿ ಆ ಮೂಲಕ ಸಿನಿಮಾ ಮಂದಿರಗಳನ್ನು ತುಂಬಿಸಲಾಗುತ್ತಿದೆ ಎಂಬ ಅಸಹನೆಯೊಂದು ಸಿನಿಮಾ ರಂಗದಲ್ಲಿಯೇ ನಿಗಿನಿಗಿಸುತ್ತಿದೆ. ಮೇಲುನೋಟಕ್ಕಿದು ಒಂದು ತೋಪು ಸಿನಿಮಾವನ್ನು ಗೆಲ್ಲಿಸುವ ಹಣವಂತರ ಸಹಜ ಸರ್ಕಸ್ಸಿನಂತೆ ಕಾಣಿಸಬಹುದು. ಆದರೆ, ಅದು ಕನ್ನಡ ಚಿತ್ರರಂಗದ ಮೇಲೆ ಬೀರೋ ಅನಾಹುತಕಾರಿ ಪರಿಣಾಮ ದೀರ್ಘಕಾಲಿಕವೆಂಬುದು ಸತ್ಯ!

ನಂಬಿಕೆಯ ಮೇಲೆ ಕತ್ತರಿ
ಕೆಜಿಎಫ್, ಕಾಂತಾರದಂಥಾ ಸಿನಿಮಾಗಳು ಪ್ಯಾನಿಂಡಿಯಾ ಮಟ್ಟದಲ್ಲಿ ಗೆಲುವು ಕಂಡಿವೆ. ಇದರಿಂದಾಗಿ ಕನ್ನಡ ಸಿನಿಮಾ ರಂಗದ ಘನತೆ ರಾಷ್ಟ್ರ ಮಟ್ಟಕ್ಕೇರಿದೆ. ಆದರೆ, ಒಂದಿಡೀ ಚಿತ್ರರಂಗದ ಬೆಳವಣಿಗೆಗೆ ಇಂಥಾ ಸಿನಿಮಾಗಳಿಂದಾಗೋ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು. ಚಂಡಮಾರುತ ಬಂದು ಹೋದ ಮೇಲೆ ಮ್ಲಾನ ವಾತಾವರಣವೊಂದು ನಿರ್ಮಾಣವಾಗುತ್ತದಲ್ಲಾ? ಅಂಥಾದ್ದೇ ಸ್ಥಿತಿ ಪ್ಯಾನಿಂಡಿಯಾ ಸಿನಿಮಾಗಳು ತೆರೆಗಂಡ ನಂತರ ಕನ್ನಡ ಚಿತ್ರರಂಗವನ್ನು ಆಚವರಿಸಿಕೊಳ್ಳುತ್ತೆ. ಇಂತಾ ವಾತಾವರಣದಲ್ಲಿ ಅದೆಷ್ಟೋ ಚೆಂದದ ಸಿನಿಮಾಗಳು ನಾನಾ ಅಡೆತಡೆಗಳನ್ನು ಎದುರಿಸಿ ಸೋತು ಮಾಯವಾಗುತ್ತವೆ. ಇಂಥಾ ಅದೆಷ್ಟೋ ಆಘಾತದ ನಂತರ ಹಂತ ಹಂತವಾಗಿ ಪ್ರೇಕ್ಷಕರಲ್ಲೊಂದು ನಂಬಿಕೆ ಮೂಡಿಸಿ, ಕರ್ನಾಟಕಕ್ಕೆ ಸೀಮಿತವಾದ ಚಿತ್ರವನ್ನೂ ನೋಡುವಂತೆ ಮಾಡುವಷ್ಟರಲ್ಲಿ ಅದೆಷ್ಟೋ ಸೋಲುಗಳೆದುರಾಗಿವೆ. ಅನೇಕರು ಲುಕ್ಸಾನಿನ ಶೂಲಕ್ಕೆ ಸಿಕ್ಕು ಕಂಗಾಲಾಗಿದ್ದಾರೆ. ಹೀಗೆ ಸಾಗಿ ಬಂದು ಕನ್ನಡ ಚಿತ್ರರಂಗದಲ್ಲಿ ಈಗೊಂದು ಲವಲವಿಕೆಯ ವಾತಾವರಣ ನಿರ್ಮಾಣವಾಗಿತ್ತು. ಇಂಥಾ ಹೊತ್ತಿನಲ್ಲಿ ಕಲ್ಟ್ ಮೂಲಕ ಝೈದ್ ಖಾನ್ ಪ್ರೇಕ್ಷಕ ವಲಯದಲ್ಲಿ ಮೂಡಿಕೊಂಡಿದ್ದ ನಂಬಿಕೆಯ ಚಿಗುರಿನ ಮೇಲೆ ಕತ್ತರಿಯಾಡಿಸಿ ಬಿಟ್ಟಿದ್ದಾನೆ!
ಅಷ್ಟಕ್ಕೂ ಈತ ತನ್ನ ತಂದೆ ಜಮೀರ್ ಅಹ್ಮದ್ ಪ್ರಭೆ ಬಳಸಿಕೊಂಡೇ ಕಲ್ಟ್ ಚಿತ್ರದ ಪ್ರಮೋಷನ್ನು ನಡೆಸಿದ್ದ. ಶಿಡ್ಲಘಟ್ಟದಲ್ಲಿ ಅವನ್ಯಾರೋ ಅಯೋಗ್ಯ ರಾಜೀವ್ ಗೌಡ ಎಂಬಾತ ಪೌರಾಯುಕ್ತೆಯನ್ನು ಹೀನಾಯವಾಗಿ ನಿಂದಿಸಿದ ವಿಚಾರ ವಿವಾದವೆಬ್ಬಿಸಿತ್ತು. ಹೀಗೆ ಕಾಂಗ್ರೆಸ್ ಸರ್ಕಾರದ ಅಧಿಕಾರ ಬಲವನ್ನು ಬಳಸಿಕೊಂಡೇ ಊರುತುಂಬಾ ಪ್ರಚಾರ ನಡೆಸಿದ್ದ ಝೈದ್ ಖಾನ್ ತನ್ನ ಮೂರಡಿ ದೇಹದೊಳಗೆ ಆರಡಿಯ ಸಲ್ಮಾನ್ ಖಾನ್ನನ್ನೇ ಆವಾಹಿಸಿಕೊಂಡಂತಿದ್ದ. ಅದ್ಯಾರೋ ಅಭಿಮಾನಿಗಳು ಸಭೆಯಿಂದೆದ್ದು ಬಂದು ಝೈದ್ನನ್ನು ನೋಡಲು ವೇದಿಕೆಗೆ ನುಗ್ಗೋದಂತೆ, ಝೈದ್ ಖಾನ್ ಸಾಕಿಕೊಂಡ ಅಂಗರಕ್ಷಕರು ತಡೆಯೋದಂತೆ, ಕರುಣಾಳು ಝೈದ್ ಖಾನ್ ತನ್ನ ಅಭಿಮಾನಿಯನ್ನು ಅಂಗರಕ್ಷಕರಿಂದ ಬಿಡಿಸಿ ಅಪ್ಪಿಕೊಳ್ಳೋದಂತೆ… ಇಂಥಾ ಹಳಸಲು ಸ್ಕ್ರಿಪ್ಟೆಡ್ ನಾಟಕಗಳ ಮೂಲಕ ಪ್ರಚಾರದಲ್ಲಿಯೂ ಈ ಚಿತ್ರತಂಡ ಸ್ವಂತಿಕೆ ಕಳೆದುಕೊಂಡಿತ್ತು.

ಅಪ್ಪನ ಕಾಸಲ್ಲಿ ಕಲ್ಟ್ ಕಿತಾಪತಿ
ಯಾರೋ ಬಡಪಾಯಿಗಳು ಕಲ್ಟ್ ಸಿನಿಮಾ ಮಾಡಿದ್ದರೆ ಈ ಸಿನಿಮಾವೀಗ ಹೇಳ ಹೆಸರಿಲ್ಲದಂತೆ ಗಾಯಬ್ ಆಗುತ್ತಿತ್ತು. ಕಲ್ಟ್ ಈಗ ಸಿನಿಮಾ ಮಂದಿರಗಳಲ್ಲಿರೋದೇ ಜಮೀರ್ ಅಹ್ಮದ್ ಕಾಸಿನ ಬಲದಿಂದ. ಹೀಗೆ ಒತ್ತಾಯಪೂರ್ವಕವಾಗಿ ಓಡುತ್ತಿರೋ ಸಿನಿಮಾವೊಂದನ್ನು ಘನತೆವೆತ್ತ ಸಿಎಂ ಸಿದ್ದರಾಮಯ್ಯ ಮೆಚ್ಚಿಕೊಂಡಾಡುತ್ತಾರೆಂದರೆ, ಹೊಸಾ ಮಾದರಿಯ ಚಿತ್ರ, ಕುಟುಂಬ ಸಮೇತ ನೋಡಬೇಕಾದ ಚಿತ್ರ ಅಂತೆಲ್ಲ ಸರ್ಟಿಫಿಕೆಟು ಕೊಡುತ್ತಾರೆಂದರೆ ಏನೆನ್ನಬೇಡ? ಸಿದ್ದು ಮಾತು ಕೇಳಿ ಖುದ್ದು ಅವರನ್ನು ಮೆಚ್ಚಿಕೊಳ್ಳುವವರೇ ಹೋಗಿ ಸಿನಿಮಾ ನೋಡಿದರೆ ಅವರೇನು ಅಂಡುಕೊಳ್ಳಲಿಕ್ಕಿಲ್ಲ? ನಾನಾ ಕೊರತೆಗಳಿಂದ ಕೃಶವಾಗಿ, ಹಣಬಲದಿಂದಲೇ ಜೀವ ಉಳಿಸಿಕೊಂಡಿರುವ ಚಿತ್ರವೊಂದರ ಪರ ವಕಾಕಲತ್ತು ವಹಿಸೋದರಿಂದಾಗುವ ಅನಾಹುತಗಳ ಬಗ್ಗೆ ಸಿದ್ದಣ್ಣನಿಗೆ ಅರಿವಿಲ್ಲವೇ? ಇಂಥಾ ಹತ್ತಾರು ಪ್ರಶ್ನೆಗಳಿವೆ. ಅದಕ್ಕೆ ಸಿದ್ದರಾಮಯ್ಯ ಮಾತ್ರವೇ ಉತ್ತರಿಸಲು ಸಾಧ್ಯ!
ಯಾವಾಗ, ಸಿಎಂ ಸಿದ್ದರಾಮಯ್ಯ ಕಲ್ಟ್ ಚಿತ್ರವನ್ನು ಹೊಗಳಿದರೋ, ಅದಾಗಿ ದಿನದೊಪ್ಪತ್ತಿನಲ್ಲಿಯೇ ಮತ್ತೊಂದು ತಗಡು ಡ್ರಾಮಾವನ್ನು ಝೈದ್ ಖಾನ್ ಸೃಷ್ಟಿಸಿದ್ದಾನೆ. ಸಿಎಂ ಸಾಹೇಬರು ಕುಟುಂಬ ಸಮೇತ ಕಲ್ಟ್ ನೋಡಲು ಹೇಳಿದ್ದಾರೆಂದು ಪರಿವಾರ ಸಮೇತವಾಗಿ ಪಟಾಲಮ್ಮೊಂದು ಗ್ಲೋಬಲ್ ಮಾಲ್ಗೆ ದಾಂಗುಡಿಯಿಟ್ಟಿದೆ. ಅಲ್ಲಿ ಮಾಲ್ ಸಿಬ್ಬಂದಿ ಸಿನಿಮಾ ನೋಡಲು ಅವಕಾಶ ಕೊಟ್ಟಿಲ್ಲ ಅಂತ ಆ ಪಟಾಲಮ್ಮು ಪುಕಾರೆಬ್ಬಿಸಿದೆ. ಇಂಥಾ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ಮೂಲಕ ಬಿಟ್ಟಿ ಪ್ರಚಾರ ಸಿಗುತ್ತದೆಂಬ ಅಂದಾಜು ಝೈದ್ನದ್ದಿರಬಹುದು. ಆದರೆ, ಹಳ್ಳಿ ಮೂಲೆಯಲ್ಲಿ ಕೂತು ನೋಡುವವರಿಗೂ ಕೂಡಾ ಅದೊಂದು ಪ್ರಚಾರದ ಗಿಮಿಕ್ಕೆಂಬುದು ಸ್ಪಷ್ಟವಾಗಿಯೇ ಅರಿವಾಗುತ್ತದೆ. ಪ್ರೇಕ್ಷಕರನ್ನು ದಡ್ಡರೆಂದುಕೊಂಡಿರೋ ಝೈದ್ ಖಾನ್ ಇನ್ನೂ ಅದೆಂತೆಂಥಾ ನಾಟಕ ನಿರ್ದೇಶಿಸಲಿದ್ದಾನೋ ಗೊತ್ತಿಲ್ಲ.

ಅಹಂಕಾರ ಇಳಿಯದಿದ್ದರೆ…
ಈ ಹುಡುಗ ಝೈದ್ ಖಾನ್ ಬನಾರಸ್ ಚಿತ್ರದ ಮೂಲಕ ನಾಯಕನಾಗಿ ಬೆಳಕು ಕಂಡಾಗ ಸಿನಿಮಾ ಪ್ರೇಮಿಗಳು ಖುಷಿಗೊಂಡಿದ್ದರು. ಜಯತೀರ್ಥ ಸಾರಥ್ಯದಲ್ಲಿ ಈತ ಒಂದಷ್ಟು ಪಳಗಿದ ಪ್ರದರ್ಶನ ನೀಡಿದ್ದ. ರಾಜಕೀಯ ಭಿನ್ನಾಭಿಪ್ರಾಯದ ನೆಲೆಯಲ್ಲಿ ಒಂದಷ್ಟು ಮಂದಿ ಈತನನ್ನು ಮೂದಲಿಸಿದ್ದರು. ಯಾರೇ ಕಲಾವಿದರಾದರೂ ಜಾತಿ ಧರ್ಮಗಳ ನೆಲೆಯಲ್ಲಿ ವಿರೋಧಿಸೋದು, ಹತ್ತಿಕ್ಕೋದು ತರವಲ್ಲ. ಇಂಥಾ ಮನುಷ್ಯಧರ್ಮದ ನೆಲೆಯಲ್ಲಿ ಬಹಳಷ್ಟು ಮಂದಿ ಈತನನ್ನು ಬೆಂಬಲಿಸಿದ್ದರು. ಅದಾದ ನಂತರ ಈತ ನಟಿಸಿರೋ ಎರಡನೇ ಸಿನಿಮಾಶ ಕಲ್ಟ್. ಈ ಮೂಲಕ ಭ್ರಮೆಯ ಸ್ಟಾರ್ಗಿರಿಯನ್ನು ನೆತ್ತಿಗೇರಿಸಿಕೊಂಡ ಝೈದ್ ಪ್ರೇಕ್ಷಕರೆದುರು ಠಳಾಯಿಸುತ್ತಿದ್ದಾನೆ. ಈತನ ಮಾತು ವರ್ತನೆಗಳಲ್ಲಿ ಬನಾರಸ್ ಕಾಲದ ನಯ ವಿನಯ ಮಾಯವಾಗಿಬಿಟ್ಟಿದೆ.
ಸಿನಿಮಾದ ಕಂಟೆಂಟು ಚೆಂದಗಿದ್ದರೆ ಜನ ಖಂಡಿತಾ ಗೆಲ್ಲಿಸುತ್ತಾರೆ. ಇಂಥಾ ಹರತಾಳಗಳ ಅವಶ್ಯಕತೆಯಿಲ್ಲ. ಝೈದ್ ಗೆ ಅಪ್ಪನ ಕಾಸಿನ ಬಲವಿದೆ. ಒಂದು ಸಿನಿಮಾವನ್ನು ಎಲ್ಲ ರೀತಿಯಿಂದಲೂ ಅಚ್ಚುಕಟ್ಟಾಗಿ ರೂಪಿಸೋ ಅವಕಾಶವೂ ಇದೆ.
ಅದನ್ನು ಬಳಸಿಕೊಂಡು ಒಳ್ಳೆ ಸಿನಿಮಾ ಮಾಡೋ ಅವಕಾಶವನ್ನು ಆತ ಕಲ್ಟ್ ಮೂಲಕ ಕಳೆದುಕೊಂಡಿದ್ದಾನೆ. ಬಹುಶಃ ನಿರ್ದೇಶಕರನ್ನೂ ಕೂಡಾ ಕೆಲಸದಾಳುಗಳಂತೆ ಕಾಣುವ ಗುಣದಿಂದಲೇ ಕಲ್ಟ್ ನಲ್ಲಿ ಬೇಬಿ ಕಾಣಿಸುತ್ತಾಳೆ. ಅನಿಮಲ್ ಕುಣಿದಾಡುತ್ತೆ. ಕಳೆದು ಹೋಗಿರೋದು ಸ್ವಂತಿಕೆ ಮಾತ್ರ. ಇಂಥಾ ಸಿನಿಮಾವನ್ನು ಅದ್ಯಾವ ಸೌಭಾಗ್ಯಕ್ಕೆ ಸಿದ್ದರಾಮಯ್ಯ ಹೊಗಳಿದರೋ ಗೊತ್ತಾಗುತ್ತಿಲ್ಲ. ಬಿಜೆಪಿ ಐಟಿ ಸೆಲ್ ಮಂದಿ ಸಿದ್ದರಾಮಯ್ಯನವರ ಒಳ್ಳೆ ಕೆಲಸಗಳನ್ನೂ ಮರೆಮಾಡುವಂತೆ ಟ್ರೋಲುಗಳ ಪ್ರಹಾರ ನಡೆಸುತ್ತಾ ಬರುತ್ತಿದ್ದಾರೆ. ಕಲ್ಟ್ನಂತಾ ಕಳಪೆ ಚಿತ್ರವನ್ನು ಪ್ರಮೋಟ್ ಮಾಡೋ ಮೂಲಕ ಸಿದ್ದಣ್ಣ ಸ್ವತಃ ಟ್ರೋಲುಗಳಿಗೆ ಕಂಟೆಂಟು ಒದಗಿಸಿದ್ದಾರೆ. ಇದು ನಿಜಕ್ಕೂ ಚಿತ್ರರಂಗದ ಮಟ್ಟಿಗೆ ಒಳಿತಿನ ಬೆಳವಣಿಗೆಯಲ್ಲ. ಇಂಥಾ ನಾಟಕದ ಪ್ರಚಾರದ ಪಟ್ಟುಗಳ ಮೂಲಕ ಝೈದ್ ಖಾನ್ ಬಿಡಿ; ಯಾವ ನಟನೂ ಬರಖತ್ತಾಗಲು ಸಾಧ್ಯವಿಲ್ಲ!
keywords: zaide khan, siddaramaiah, cult movie, sandalwood, cult controvercy, rachitha ram

