ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು ಇದೀಗ ದಿಲ್ ದಾರ್ ಎಂಬ ಸಿನಿಮಾ ಮೂಲಕ ಭಿನ್ನ ಬಗೆಯ ಪಾತ್ರವಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಯಾವ ಸದ್ದುಗದ್ದಲವೂ ಇಲ್ಲದೆ ಈ ಸಿನಿಮಾ ಚಿತ್ರೀಕರಣ ಮುಗಿಸಿಕೊಂಡಿದೆ. ದೊಡ್ಡ ತಾರಾಗಣ, ಪ್ರತಿಭಾನ್ವಿತ ಕಲಾವಿದರನ್ನೊಳಗೊಂಡಿರುವ ದಿಲ್ ದಾರ್ ಚಿತ್ರತಂಡವೀಗ ಬಜರಂಗಿ ಲೋಕಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದೆ. ಈ ಸಂಬಂಧವಾಗಿ ಒಂದು ಪೋಸ್ಟರ್ ಹೊರಬಂದಿದೆ. ಅದರೊಂದಿಗೆ ದಿಲ್ ದಾರ್ ಸಿನಿಮಾದಲ್ಲಿನ ಭಜರಂಗಿ ಲೋಕಿ ಗೆಟಪ್ಪು ಕೂಡಾ ಅನಾವರಣಗೊಂಡಂತಾಗಿದೆ.
ಯುವ ನಿರ್ದೇಶಕ ಮಧು ಗೌಡ ಗಂಗೂರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ ದಿಲ್ದಾರ್. ಒಂದು ಅಪರೂಪದ ಪ್ರೇಮಕಥಾನಕಕ್ಕೆ ದಿಲ್ ದಾರ್ ಮೂಲಕ ದೃಶ್ಯರೂಪ ಕೊಡಲಾಗಿದೆ ಎಂಬ ವಿಚಾರವನ್ನವರು ಈ ಹಿಂದೆಯೇ ಜಾಹೀರು ಮಾಡಿದ್ದಾರೆ. ಈ ಚಿತ್ರದಲ್ಲಿ ಭಜರಂಗಿ ಲೋಕಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆಂಬ ವಿಚಾರ ಆರಂಭದಿಂದಲೂ ಒಂದಷ್ಟು ಕುತೂಹಲ ಮೂಡಿಕೊಂಡಿತ್ತು. ಆರಂಭದಿಂದ ಇಲ್ಲಿಯವರೆಗೂ ಸಿನಿಮಾದಿಂದ ಸಿನಿಮಾಕ್ಕೆ ಭಿನ್ನ ಬಗೆಯ ಪಾತ್ರಗಳನ್ನು ಆವಾಹಿಸಿಕೊಂಡು ಬರುತ್ತಿರುವವರು ಲೋಕಿ. ಅಂಥಾ ಲೋಕಿ ದಿಲ್ದಾರ್ ಚಿತ್ರದಲ್ಲಿ ಎಂಥಾ ಪಾತ್ರ ನಿರ್ವಹಿಸಿದ್ದಾರೆ? ಅವರ ಲುಕ್ಕು ಹೇಗಿರಲಿದೆ? ಇಂಥಾ ಒಂದಷ್ಟು ಪ್ರಶ್ನೆಗಳು ಸಹಜವಾಗಿಯೇ ಪ್ರೇಕ್ಷಕರನ್ನು ಕಾಡಿದ್ದವು.
ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ಮೂಲಕವೇ ಚಿತ್ರತಂಡ ಆ ಕುತೂಹಲ ತಣಿಸಲು ಪ್ರಯತ್ನಿಸಿದಂತಿದೆ. ಜೊತೆಗೆ ಭಜರಂಗಿ ಲೋಕಿ ನಿರ್ವಹಿಸಿರೋ ಪಾತ್ರದ ಬಗ್ಗೆ ಸಣ್ಣದೊಂದು ಸುಳಿವನ್ನೂ ನಿರ್ದೇಶಕ ಮಧು ಗೌಡ ಗಂಗೂರ್ ಬಿಟ್ಟುಕೊಟ್ಟಿದ್ದಾರೆ. ಅದರನ್ವಯ ಹೇಳೋದಾದರೆ, ಭಜರಂಗಿ ಲೋಕಿ ಇಲ್ಲಿ ಕಾಲೇಜ್ ಬಾಯ್ ಆಗಿ, ವಿಲನ್ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಪ್ರೇಕ್ಷಕರನ್ನು ಚಕಿತಗೊಳಿಸಲಿದೆ. ಭಜರಂಗಿ ಲೋಕಿ ಪಾತ್ರಗಳ ಆಯ್ಕೆಯಲ್ಲಿ ಒಂದಷ್ಟು ಗುಣಮಟ್ಟ ಕಾಯ್ದುಕೊಂಡು ಬಂದಿದ್ದಾರೆ. ಅದು ಅವರ ಯಶಸ್ಸಿನ ಗುಟ್ಟೂ ಹೌದು. ಈ ಕಾರಣದಿಂದಲೇ ಅವರೊಂದು ಸಿನಿಮಾ ಒಪ್ಪಿಕೊಂಡರೆ ಆ ಬಗ್ಗೆ ಸಹಜವಾಗಿ ಕುತೂಹಲ ಮೂಡಿಕೊಳ್ಳುತ್ತೆ. ಈ ವಿಚಾರದಲ್ಲಿಯೂ ದಿಲ್ದಾರ್ ಗಮನ ಸೆಳೆಯುತ್ತಿದೆ.
ಇನ್ನುಳಿದಂತೆ, ಶ್ರೇಯಸ್ ಮಂಜು ಕೂಡಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರೋ ಸೂಚನೆಗಳಿದ್ದಾವೆ. ಅತ್ಯಂತ ಲವಲವಿಕೆಯ ಪಾತ್ರವನ್ನು ಆವಾಹಿಸಿಕೊಂಡಿರೋ ಶ್ರೇಯಸ್ ಮಂಜು ನೃತ್ಯದ ಮೂಲಕವೂ ಥ್ರಿಲ್ ಮೂಡಿಸಲು ಕಾತರರಾಗಿದ್ದಾರೆ. ನಟ ಶರಣ್ ಅವರ ತಂಗಿ ಮಗಳಾದ ಕೀರ್ತಿ ಕೃಷ್ಣ ಈ ಚಿತ್ರದ ಮೂಲಕವೇ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಸಾಧು ಕೋಕಿಲಾ, ಚಂದ್ರಪ್ರಭ, ಕಾರ್ತಿಕ್, ಚಿಲ್ಲರ್ ಮಂಜು ಮುಂತಾದ ಹಾಸ್ಯ ನಟರ ದಂಡೇ ಈ ಚಿತ್ರದಲ್ಲಿದೆ. ಕೆಜಿಎಫ್ ಖ್ಯಾತಿಯ ಆಂಡ್ರೋ ಅವಿನಾಶ್, ಭಜರಂಗಿ ಲೋಕಿ, ಅರ್ಪಿತ್ ಖಳ ನಟರಾಗಿ ನಟಿಸಿದ್ದಾರೆ. ಬಿಡುಗಡೆ ದಿನಾಂಕವೂ ಸೇರಿದಂತೆ ಮತ್ತೊಂದಷ್ಟು ಮಾಹಿತಿಗಳು ಶೀಘ್ರದಲ್ಲಿಯೇ ಪ್ರೇಕ್ಷಕರನ್ನು ತಲುಪಿಕೊಳ್ಳಲಿವೆ.