ತಮ್ಮ ವಿಶಿಷ್ಟವಾದ ಕಂಠಸಿರಿ ಮತ್ತು ಸ್ಫುಟವಾದ ಕನ್ನಡ ಭಾಷಾ ಪಾಂಡಿತ್ಯದಿಂದ ಹೆಸರಾಗಿರುವವರು ಸುಚೇಂದ್ರ ಪ್ರಸಾದ್. ಅವರು ಇತ್ತೀಚಿನ ವರ್ಷಗಳಲ್ಲಿ ನಿರ್ದೇಸಕರಾಗಿಯೂ ಗಮನ ಸೆಳೆದಿದ್ದಾರೆ. ಅದೇ ಹಾದಿಯಲ್ಲೀಗ ಪದ್ಮಗಂಧಿ ಎಂಬ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಅದರ ಕೆಲಸ ಕಾರ್ಯಗಳೆಲ್ಲವೂ ಪೂರ್ಣಗೊಂಡು ಇದೀಗ ಬಿಡುಗಡೆಯ ಹೊಸ್ಲಿಲಿನಲ್ಲಿದೆ. ಈ ಹಂತದಲ್ಲಿ ಚಿತ್ರತಂಡ ಹಾಡುಗಳ ಗುಯಚ್ಛದ ಝಲಕ್ಕಿನೊಂದಿಗೆ ಮಾಧ್ಯಮದವರನ್ನು ಮುಖಾಮುಖಿಯಾಗಿದೆ. ನಿರ್ದೇಶಕ ಸುಚೇಂದ್ರ ಪ್ರಸಾದ್ ಮತ್ತು ಈ ಚಿತ್ರಕ್ಕೆ ಕಥೆ ಬರೆದು ನಿರ್ಮಾಣ ಮಾಡಿರುವ ಎಸ್.ಆರ್ ಲೀಲಾ ಅವರು ಒಂದಷ್ಟು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಪದ್ಮಗಂಧಿ ಚಿತ್ರದಲ್ಲಿ ಹಾಡುಗಳಿಗೂ ಕೂಡಾ ಪ್ರಾಧಾನ್ಯತೆಯಿದೆ. ಅವುಗಳನ್ನು ಈಗಾಗಲೇ ಸಂಪೂರ್ಣವಾಗಿ ತಯಾರು ಮಾಡಲಾಗಿದೆ. ಅದರ ಒಂದಷ್ಟು ತುಣುಕುಗಳನ್ನು ಈ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹಾಡುಗಳೆಲ್ಲವೂ ಬಿಡುಗಡೆಗೊಳ್ಳುವ ಸೂಚನೆ ಈ ಮೂಲಕ ರವಾನೆಯಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸುಚೇಂದ್ರ ಪ್ರಸಾದ್, ನಿರ್ದೇಶಕರಾಗಿ ಪದ್ಮಗಂಧಿಗೆ ದೃಶ್ಯರೂಪ ಕೊಟ್ಟ ಬಗೆಯ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕಥೆಯೂ ಸೇರಿದಂತೆ ಎಲ್ಲದರಲ್ಲಿ ಅಡಕವಾಗಿರುವ ವಿಶೇಷತೆಗಳನ್ನು ವಿವರಿಸಿದ್ದಾರೆ. ಈ ಮೂಲಕ ಪದ್ಮಗಂಧಿಯನ್ನು ಸಮರ್ಥವಾಗಿ ಪ್ರೇಕ್ಷಕರಿಗೆ ತಲುಪಿಸುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಖ್ಯಾತ ಅಂಕಣಕಾರ್ತಿ, ಮಾಜಿ ಎಂಎಲ್ಸಿ ಪ್ರೊ. ಎಸ್.ಆರ್ ಲೀಲಾ ಅವರು ತಮ್ಮ ಕನಸಿನ ಕಥೆಯನ್ನು ಪರಿಣಾಮಕಾರಿಯಾಗಿ ದೃಶ್ಯೀಕರಿಸಿರುವ ಸುಚೇಂದ್ರ ಪ್ರಸಾದ್ ಅವರ ಕಸುಬುದಾರಿಕೆಯನ್ನು ಮೆಚ್ಚಿಕೊಳ್ಳುತ್ತಲೇ, ಕಥೆಯ ಬಗೆಗಿನ ಬೆರಗಿನ ವಿಚಾರಗಳನ್ನು ಜಾಹೀರು ಮಾಡಿದ್ದಾರೆ.
ಸಸ್ಯ ಶಾಸ್ತ್ರದ ಪ್ರಕಾರ ಏಷ್ಯಾ ಖಂಡದ ದೇಸೀ ಹೂವಾದ ಕಮಲ ಪುರಾಣ ಕಾಲದಿಂದಲೂ ಶ್ರೇಷ್ಠ ಪುಷ್ಪವಾಗಿ ಘನತೆ ಪಡೆದುಕೊಂಡಿದೆ. ಪ್ರಾಚೀನ ಕಾಲದಿಂದ ಆರಂಭವಾಗಿ ಅರ್ವಾಚೀನ ಕಾಲದವರೆಗೂ ಅದೇ ಪ್ರಭೆಯನ್ನು ಉಳಿಸಿಕೊಂಡಿರುವ ಕಮಲ ವಿಶಾಲವಾದ ಹರವುಳ್ಳ ಅಪರೂಪದ ಪುಷ್ಪ. ಕೆದಕುತ್ತಾ ಹೋದರೆ ಈಜಿಪ್ಟ್ ನಾಗರೀಕತೆಯವರೆಗೂ ಕೂಡಾ ಇದರ ಪ್ರಭಾವಳಿ ಹಬ್ಬಿಕೊಂಡಿರುವ ಅಚ್ಚರಿಯೊಂದು ಎದುರಾಗುತ್ತೆ. ಸಾವಿರಾರು ವರ್ಷದ ಹಿಂದಿನ ಬೀಜವನ್ನು ಇಂದು ಬಿತ್ತಿದರೂ ಸಲೀಸಾಗಿ ಚಿಗುರೊಡೆದು, ಗಿಡವಾಗಿ, ಹೂವಾಗಿ ನಗುವ ಶಕ್ತಿ ಈ ಜಗತ್ತಿನಲ್ಲಿ ಯಾವುದಾದರೂ ಪುಷ್ಪಕ್ಕಿದೆ ಎಂದರೆ ಅದು ಕಮಲಕ್ಕೆ ಮಾತ್ರ. ಸಮರ ಕಲೆಗಳಲ್ಲಿಯೂ ಈ ಹೂವಿನ ಐತಿಹ್ಯವಿದೆ. ಮಹಾಭಾರತದಲ್ಲಿ ಘಟಿಸುವ ಯುದ್ಧದಲ್ಲಿ ನಾನಾ ವ್ಯೂಹಗಳು ರಚನೆಯಾದದ್ದು ಗೊತ್ತೇ ಇದೆ. ಚಕ್ರವ್ಯೂಹ, ಗರುಡ ವ್ಯೂಹದಂಥವುಗಳು ನಮ್ಮೆಲ್ಲರಿಗೆ ಪರಿಚಿತ. ವಿಶೇಷವೆಂದರೆ, ಅದರಲ್ಲಿ ಪದ್ಮವ್ಯೂಹವೂ ಸೇರಿಕೊಂಡಿದೆ.
ಇನ್ನು ಬ್ರಿಟೀಷರ ವಿರುದ್ಧ ನಡೆದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿಯೂ ಕಮಲದ ಹೂವು, ದಂಟನ್ನು ಬಳಸಿಕೊಂಡು ತಾತ್ಯಾ ಟೋಪೆ ಕ್ರಾಂತಿಯನ್ನೇ ಮಾಡಿದ್ದರು. ಅದು ಆಪರೇಷನ್ ರೆಡ್ ಲೋಟಸ್ ಅಂತಲೇ ಹೆಸರಾಗಿತ್ತು. ದೇವಾನು ದೇವತೆಗಳ ಆಸನವಾಗಿದ್ದ ಕಮಲ ಅದೊಂದು ರೀತಿಯಲ್ಲಿ ಸರ್ವಾಂತರ್ಯಾಮಿ. ಶಿಲ್ಪಕಲೆ ಸೇರಿದಂತೆ ಬಹುತೇಕ ಎಲ್ಲವನ್ನೂ ಕಮಲ ಪುಷ್ಪ ಆವರಿಸಿಕೊಂಡಿದೆ. ನಾನಾ ಕಾಲಘಟ್ಟಗಳನ್ನು ದಾಟಿಕೊಂಡು ಬಂದಿರುವ ಕಮಲ, ಆಧುನಿಕ ಜಗತ್ತಿನ ಫ್ಯಾಶನ್ ಲೋಕವನ್ನೂ ಸೆಳೆಯುತ್ತಿದೆ. ಕೆಸರಲ್ಲಿ ಹುಟ್ಟಿದರೂ ಪರಿಶುದ್ಧವಾಗಿರುವ, ಯಾವುದನ್ನೂ ಅಂಟಿಸಿಕೊಳ್ಳದ ಗುಣ ಹೊಂದಿರುವ ಕಮಲ ಈ ನೆಲದ ಅಸ್ಮಿತೆಗೆ ಯಾವತ್ತಿಗೂ ಮರೆಯಾಗದಂತೆ ಅಂಟಿಕೊಂಡಿರುವ ಬಗೆ ಮಾತ್ರ ಅಚ್ಚರಿ ಮೂಡಿಸುವಂತಿದೆ. ಇಪ್ಪತೈದು ಸಾವಿರಕ್ಕೂ ಹೆಚ್ಚು ಪರ್ಯಾಯ ಪದಗಳಿಂದ ಕರೆಯಿಸಿಕೊಳ್ಳುವ ಕಮಲ ಪುಷ್ಪದ ಸುತ್ತಾ ಎಲ್ಲರನ್ನೂ ಅಚ್ಚರಿಗೀಡುಮಾಡುವ ವಿಚಾರಗಳಿದ್ದಾವೆ. ೨೦೧೬ರಿಂದ ನಿರಂತರವಾಗಿ ಅಧ್ಯಯನ ನಡೆಸಿ, ಕಮಲದ ಬಗೆಗಿನ ರೋಚಕ ವಿಚಾರಗಳನ್ನು ಕಲೆ ಹಾಕಿರುವ ಎಸ್ ಆರ್ ಲೀಲಾ ಪದ್ಮಗಂಧಿಯ ಗಟ್ಟಿ ಕಥೆಯನ್ನು ಸಿದ್ಧಪಡಿಸಿದ್ದಾರಂತೆ.
ಒಂದು ಹೂವಿನ ಭೂಮಿಕೆಯಲ್ಲಿ ಸಿನಿಮಾ ರೂಪುಗೊಳ್ಳುತ್ತದೆಯೆಂದರೆ, ಅದರ ಮೇಲೊಂದು ಬೆರಗು ಹಬ್ಬಿಕೊಳ್ಳೋದು ಸಹಜ. ಈಗ ಚಿತ್ರತಂಡ ಪತ್ರಿಕಾಗೋಷ್ಠಿಯ ಮೂಲಕ ಅಂಥಾ ಬೆರಗನ್ನು ಮತ್ತಷ್ಟು ಉದ್ದೀಪಿಸುವಂಥಾ ಅಂಶಗಳನ್ನು ಹಂಚಿಕೊಂಡಿದೆ. ಪರಿಕಲ್ಪನೆ, ನಿರ್ಮಾಣ ಡಾ. ಎಸ್.ಆರ್ ಲೀಲಾ, ಚಿತ್ರಕಥೆ-ಸಂಭಾಷಣೆ-ನಿರ್ದೇಶನ ಕ. ಸುಚೇಂದ್ರ ಪ್ರಸಾದ, ಡಾ. ದೀಪಕ್ ಪರಮಶಿವನ್ ಸಂಗೀತ, ಎನ್. ನಾಗೇಶ್ ನಾರಾಯಣಪ್ಪ ಸಂಕಲನ, ಮನು ಯಾಪ್ಲಾರ್ ಮತ್ತು ನಾಗರಾಜ್ ಅದ್ವಾನಿ ಛಾಯಾಗ್ರಹಣವಿರುವ ಈ ಚಿತ್ರ ಮಹಾಪದ್ಮ, ಮೃತ್ಯುಂಜಯ ಶಾಸ್ತ್ರಿ , ಪಂಡಿತ ಪ್ರಸನ್ನ ವೈದ್ಯ, ಡಾ. ದೀಪಕ್ ಪರಮಶಿವನ್, ಹೇಮಂತ ಕುಮಾರ ಜಿ, ಪರಿಪೂರ್ಣ, ಮುಂತಾದವರ ತಾರಾಗಣದೊಂದಿಗೆ ಕಳೆಗಟ್ಟಿಕೊಂಡಿದೆ. ಶೀಘ್ರದಲ್ಲಿಯೇ ಚಿತ್ರತಂಡ ಹಾಡುಗಳ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದೆ. ಆಗಸ್ಟ್ ತಿಂಗಳಲ್ಲಿ ಪದ್ಮಗಂಧಿ ಬಿಡುಗಡೆಗೊಳ್ಳುವ ಸಾಧ್ಯತೆಗಳಿದ್ದಾವೆ.