ನಟಿಯಾಗಿದ್ದ ಕಂಗನಾ ರಾಣಾವತ್ ಇದೀಗ ಸಂಸದೆಯಾಗಿದ್ದಾರೆ. ಆದರೆ, ನಟಿಯಾಗಿದ್ದ ಸಂದರ್ಭದಲ್ಲಿನ ಉತ್ಸಾಹ, ಆಗ ನೀಡುತ್ತಿದ್ದ ಪ್ರತಿಕ್ರಿಯೆಗಳು ಮತ್ತು ವಿವಾದದ ಕಿಡಿ ಹೊತ್ತಿಸುವ ಉಮೇದು ಈಗಿದ್ದಂತೆ ಕಾಣಿಸುತ್ತಿಲ್ಲ. ಅಧಿಕಾರ ಕೇಂದ್ರಕ್ಕೆ ಬರುತ್ತಲೇ ಮಾಮೂಲಿ ರಾಜಕಾರಣಿಯಾಗಿ ಕಳೆದು ಹೋಗುವ ಸಂದಿಗ್ಧ ಬಿಂದುವೊಂದರಲ್ಲಿ ಕಂಗನಾ ಕಂಗೆಟ್ಟು ನಿಂತಂತೆ ಭಾಸವಾಗುತ್ತಿದೆ. ಓರ್ವ ರಾಜಕಾರಣಿಯಾಗಿಯೂ ಆಕೆ ಭಿನ್ನ ನೆಲೆಯಲ್ಲಿ ಕಾಣಿಸುತ್ತಿಲ್ಲ. ಓರ್ವ ನಟಿಯಾಗಿಯಂತೂ ಆಕೆಯ ವೃತ್ತಿ ಬದುಕು ಪಾತಾಳ ಸೇರಿಕೊಂಡು ವರ್ಷವೇ ಕಳೆದಿದೆ. ಒಂದು ವೇಳೆ ರಾಜಕಾರಣದಿಂದ ಹಿಂದೆ ಸರಿದರೂ ಆಕೆಯದ್ದು ಅಕ್ಷರಶಃ ಅತ್ತ ಧರಿ ಇತ್ತ ಪುಲಿಯೆಂಬಂಥಾ ಸ್ಥಿತಿ. ಹೀಗಿರುವಾಗಲೇ ಕಂಗನಾ ತಲೆ ಕೂದಲು ಬಿಳಿ ಬಣ್ಣಕ್ಕೆ ತಿರುಗಲಾರಂಭಿಸಿವೆ!
ನಟಿಯಾಗಿ ಕಂಗನಾ ಸಾಲು ಸಾಲು ಸೋಲು ಕಂಡಿದ್ದಾರೆ. ಈ ನಡುವೆ ಆಕೆ ರಾಜಕಾರಣಿಯಾಗಿ, ಸಾರ್ವಜನಿಕವಾಗಿಯೇ ತಲೆಯ ಅಲ್ಲಲ್ಲಿ ನೆರೆತ ಬಿಳು ಕೂದಲನ್ನು ಬಿಟ್ಟುಕೊಂಡು ಕಾಣಿಸಲಾರಂಭಿಸಿದ್ದಾರೆ. ಈ ಬಗ್ಗೆ ಮಾತಾಡಿರುವ ಆಕೆ ಬಿಳಿಕೂದಲು ವಯಸ್ಸಾದ ಲಕ್ಷಣವಾದರೆ, ವಯಸ್ಸಾಗೋದು ಗೌರವದ ಲಕ್ಷಣ. ಸಿನಿಮಾ ರಂಗದಲ್ಲಿ ವಯಸ್ಸಾದ ನಟಿಯರಿಗೆ ಅವಕಾಶ ಇಲ್ಲ ಅನ್ನೋದು ನಿಜ. ಆದರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ ಎಂಬರ್ಥದಲ್ಲಿ ಮಾತಾಡಿದ್ದಾರೆ. ಆದರೆ, ನಟಿಯಾಗಿ ಆಕೆ ಮತ್ತೆ ನೆಲೆ ಕಂಡುಕೊಳ್ಳ ಹೊರಟರೆ, ಅದು ಆಕೆಯ ಭೋಳೇ ಮಾತಿನಷ್ಟು ಸಲೀಸಾದ ಸಂಗತಿಯೇನಲ್ಲ. ಬೇರೆ ನಿರ್ಮಾಪಕರು ಸಿನಿಮಾ ಮಾಡಲು ಮುಂದೆ ಬರೋದು ಕಷ್ಟವಿದೆ. ಒಂದು ವೇಳೆ ರೊಚ್ಚಿಗೆದ್ದು ಖುದ್ದು ಕಂಗನಾ ತನ್ನ ಚಿತ್ರಕ್ಕೆ ತಾನೇ ಬಂಡವಾಳ ಹೂಡಿದರೂ, ಒಂದು ಸಿನಿಮಾವನ್ನು ಜೈಸಿಕೊಳ್ಳೋದೇ ಕಷ್ಟವಿದೆ.
ಹಾಗೆ ನೋಡಿದರೆ, ಕಂಗನಾ ಥರ ಥರದ ಪಾತ್ರಗಳನ್ನು ಮಾಡಬೇಕೆಂಬಂಥಾ ತುಡಿತ ಹೊಂದಿರುವ ನಟಿ. ಆದರೆ, ಒಂದು ಹಂತದ ನಂತರ ಅತೀ ವಿಶ್ವಾಸದಿಂದ ಕಂಗನಾ ಎತ್ತಿಟ್ಟ ಹೆಜ್ಜೆಗಳೆಲ್ಲವೂ ಕುಸಿದಿವೆ. ಅದರ ಫಲವಾಗಿಯೇ ೨೦೨೨ರಿಂದೀಚೆಗೆ ಆಕೆಯ ವೃತ್ತಿ ಬದುಕಿಗೆ ಸರಣಿ ಸೋಲಿನ ಗ್ರಹಣ ಕವುಚಿಕೊಂಡಿದೆ. ಧಕಡ್, ತಲೈವಿ, ಫಂಡಾ ಮುಂತಾದ ಬಹು ನಿರೀಕ್ಷಿತ ಸಿನಿಮಾಗಳೇ ಸೋಲು ಕಂಡಿದ್ದವು. ಇಂಥಾ ಸೋಲುಗಳನ್ನೆಲ್ಲ ಎಮರ್ಜೆನ್ಸಿ ಚಿತ್ರದ ಮೂಲಕ ನೀಗಿಕೊಳ್ಳುವ ಅಚಲ ವಿಶ್ವಾಸವೊಂದು ಕಂಗನಾಗಿದ್ದಂತಿತ್ತು. ಈ ಚಿತ್ರದಲ್ಲಿ ಆಕೆ ಇಂದಿರಾ ಗಾಂಧಿಯ ಅವತಾರವೆತ್ತಿದ್ದರು. ಆದರೆ, ಎಮರ್ಜೆನ್ಸಿ ಬಿಡುಗಡೆಯಾದ ಬಳಿಕ ಚಿತ್ರಣವೇ ಅದಲು ಬದಲಾಗಿ ಬಿಟ್ಟಿತ್ತು. ಆರಂಭದಲ್ಲಿ ಪಸರಿಸಿಕೊಂಡಿದ್ದ ಮಿಶ್ರ ಪ್ರತಿಕ್ರಿಯೆ, ದಿನದಿಂದ ದಿನಕ್ಕೆ ನೀರಸ ಸ್ವರೂಪ ಪಡೆದುಕೊಂಡಿತ್ತು. ಅದಾದ ನಂತರ ಕಂಗನಾ ಸದ್ಯ ಸಂಸದೆಯಾಗಿದ್ದಾರೆ. ಆಕೆ ಇನ್ನು ನಟಿಯಾಗಿ ನೆಲೆ ಕಂಡುಕೊಳ್ಳೋದು ಕಷ್ಟವಿದೆ. ಆಕೆ ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಸರಿಯುವ ತೀರ್ಮಾನ ಮಾಡಿದ್ದಾರೆಂದು ಆಪ್ತ ಬಳಗವೇ ಹೇಳುತ್ತಿದೆ!